ADVERTISEMENT

ಜಗತ್ತಿಗೆ ಭಾರತದ ಸಂಸ್ಕೃತಿ ಪರಿಚಯಿಸಿ: ಪ್ರಧಾನಿ ಮೋದಿ

ಸೃಜನಶೀಲ ವಸ್ತುವಿಷಯದಲ್ಲಿ ಛಾಪು ಮೂಡಿಸಿದವರಿಗೆ ‘ನ್ಯಾಷನಲ್ ಕ್ರಿಯೇಟರ್ಸ್‌’ ಪ್ರಶಸ್ತಿ ಪ್ರದಾನ

ಪಿಟಿಐ
Published 8 ಮಾರ್ಚ್ 2024, 12:58 IST
Last Updated 8 ಮಾರ್ಚ್ 2024, 12:58 IST
<div class="paragraphs"><p>ನವದೆಹಲಿಯ ಭಾರತ ಮಂಟಪಮ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸೃಜನಾತ್ಮಕ ವಸ್ತುವಿಷಯ ನಿರ್ಮಾಣದಲ್ಲಿ ತೊಡಗಿರುವ ಕೀರ್ತಿಕಾ ಗೋವಿಂದಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ನ್ಯಾಷನಲ್‌ ಕ್ರಿಯೇಟರ್ಸ್’ ಪ್ರಶಸ್ತಿ ಪ್ರದಾನ ಮಾಡಿದರು</p></div>

ನವದೆಹಲಿಯ ಭಾರತ ಮಂಟಪಮ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸೃಜನಾತ್ಮಕ ವಸ್ತುವಿಷಯ ನಿರ್ಮಾಣದಲ್ಲಿ ತೊಡಗಿರುವ ಕೀರ್ತಿಕಾ ಗೋವಿಂದಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ನ್ಯಾಷನಲ್‌ ಕ್ರಿಯೇಟರ್ಸ್’ ಪ್ರಶಸ್ತಿ ಪ್ರದಾನ ಮಾಡಿದರು

   

–ಪಿಟಿಐ ಚಿತ್ರ

ನವದೆಹಲಿ: ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಗಳ ಕುರಿತು ಸಮಗ್ರ ಮಾಹಿತಿ ಒದಗಿಸುವ ವಸ್ತುವಿಷಯ ಸೃಜಿಸುವ ಮೂಲಕ ‘ಕ್ರಿಯೇಟ್‌ ಆನ್‌ ಇಂಡಿಯಾ ಮೂವ್‌ಮೆಂಟ್‌’ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಲಹೆ ನೀಡಿದರು. 

ADVERTISEMENT

ಇಲ್ಲಿನ ಭಾರತ ಮಂಟಪಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ‘ನ್ಯಾಷನಲ್‌ ಕ್ರಿಯೇಟರ್ಸ್‌’ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

‘ಭಾರತದ ಭವ್ಯ ಪರಂಪರೆ, ಸಂಸ್ಕೃತಿ–ಸಂಪ್ರದಾಯಗಳನ್ನು ವಿಶ್ವಕ್ಕೆ ಪರಿಚಯಿಸಲು ಈ ಚಳವಳಿಯನ್ನು ಆರಂಭಿಸೋಣ. ಈ ವಿಷಯಗಳ ಕುರಿತ ಸೃಜನಾತ್ಮಕ ಕೃತಿಗಳಿಂದ ಜಾಗತಿಕ ಮಟ್ಟದಲ್ಲಿ ನಾವು ಹೆಚ್ಚು ವೀಕ್ಷಕರು/ಕೇಳುಗರನ್ನು ತಲುಪಲು ಸಾಧ್ಯವಾಗಲಿದೆ’ ಎಂದು ಮೋದಿ ಹೇಳಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳನ್ನು ಕೋರಿದ ಅವರು, ‘ನಾರಿ ಶಕ್ತಿ’ಯೂ ನಿಮ್ಮ ಸೃಜನಾತ್ಮಕ ವಸ್ತುವಿಷಯದ ಭಾಗವಾಗಲಿ’ ಎಂದರು.

‘ಮುಂದಿನ ಶಿವರಾತ್ರಿ ಇಂಥ ಕಾರ್ಯಕ್ರಮದ ಗ್ಯಾರಂಟಿ’: ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವುದನ್ನು ಸೂಚ್ಯವಾಗಿ ಪ್ರಸ್ತಾಪಿಸಿದ ಮೋದಿ, ‘ಸಾಧ್ಯವಾದರೆ, ಮುಂದಿನ ಶಿವರಾತ್ರಿಯಂದು ನಾನು ಇಂತಹ ಕಾರ್ಯಕ್ರಮ ಆಯೋಜಿಸುತ್ತೇನೆ. ಇದು ನಾನು ನಿಮಗೆ ನೀಡುವ ಗ್ಯಾರಂಟಿ’ ಎಂದು ಹೇಳಿದರು.

ಆಗ, ಪ್ರೇಕ್ಷಕರು ‘ಅಬ್‌ ಕಿ ಬಾರ್‌ 400 ಪಾರ್‌’(ಈ ಬಾರಿ 400ಕ್ಕೂ ಹೆಚ್ಚು ಸ್ಥಾನ) ಎಂಬ ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ಇದು ಮೋದಿ ಗ್ಯಾರಂಟಿಯಲ್ಲ, 140 ಕೋಟಿ ಭಾರತೀಯರ ಗ್ಯಾರಂಟಿ’ ಎಂದು ಹೇಳಿದರು.

ಮುಂಬರುವ ಚುನಾವಣೆಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡುವವರಲ್ಲಿ ಅವರ ಹಕ್ಕು ಮತ್ತು ಜವಾಬ್ದಾರಿ ಕುರಿತು ಜಾಗೃತಿ ಮೂಡಿಸುವಂತೆ ಸೃಜನಶೀಲ ವಸ್ತುವಿಷಯ ರೂಪಿಸುವವರಿಗೆ ಮನವಿ ಮಾಡಿದರು.

ಜನಮಾನಸದಲ್ಲಿ ಮನೆ ಮಾಡಿರುವ ತಪ್ಪುಗಳನ್ನು ಹೋಗಲಾಡಿಸುವಲ್ಲಿಯೂ ಸೃಜನಶೀಲತೆಯಿಂದ ಸಾಧ್ಯವಾಗಲಿದೆ

-ನರೇಂದ್ರ ಮೋದಿ ಪ್ರಧಾನಿ

1.5 ಲಕ್ಷ ನಾಮನಿರ್ದೇಶನಗಳ ಸಲ್ಲಿಕೆ

ಕಥೆ ಹೇಳುವವರು ಗ್ರೀನ್‌ ಚಾಂಪಿಯನ್ ಸಾಮಾಜಿಕ ಬದಲಾವಣೆ ಸಾಂಸ್ಕೃತಿಕ ರಾಯಭಾರಿ ತಂತ್ರಜ್ಞಾನ ಪಾರಂಪರಿಕ ವಸ್ತ್ರವಿನ್ಯಾಸ ಆಹಾರ ಸೇರಿದಂತೆ 20 ವಿಭಾಗಗಳಲ್ಲಿ ‘ನ್ಯಾಷನಲ್‌ ಕ್ರಿಯೇಟರ್ಸ್‌’ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದ್ದು ಇದಕ್ಕಾಗಿ 1.5 ಲಕ್ಷಕ್ಕೂ ಹೆಚ್ಚು ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಪಂಕ್ತಿ ಪಾಂಡೆ(ಗ್ರೀನ್‌ ಚಾಂಪಿಯನ್‌ ವಿಭಾಗದಲ್ಲಿ ಪ್ರಶಸ್ತಿ) ಕೀರ್ತಿಕಾ ಗೋವಿಂದಸ್ವಾಮಿ( ಕಥೆ ಹೇಳುವುದು) ಮೈಥಿಲಿ ಠಾಕೂರ್(ಗಾಯಕಿ–ವರ್ಷದ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ) ಗೌರವ್ ಚೌಧರಿ (ತಂತ್ರಜ್ಞಾನ) ಕಾಮಿಯಾ ಜಾನಿ (ಪ್ರವಾಸ ಕುರಿತ ಸೃಜನಾತ್ಮಕ ವಸ್ತುವಿಷಯ) ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.