ಪಟ್ನಾ: ಪಾಕಿಸ್ತಾನ ವಿರುದ್ಧದ ಸಂಘರ್ಷವನ್ನು ಭಾರತೀಯ ಸೇನೆ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಆದರೆ, ಪಾಕಿಸ್ತಾನದ ವಿರುದ್ಧ ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಫಲವಾಗಿದೆ ಎಂದು ಭೀಮ್ ಆರ್ಮಿ ಮುಖ್ಯಸ್ಥ ಹಾಗೂ ಸಂಸದ ಚಂದ್ರಶೇಖರ ಅಜಾದ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ, ಕೇಂದ್ರ ಸರ್ಕಾರವು ಪಾಕ್ ವಿರುದ್ಧ ತೆಗೆದುಕೊಂಡ ನಿರ್ಧಾರಗಳನ್ನು ಟೀಕಿಸಿದರು.
ಭಾರತೀಯ ಸೇನೆಯು, ಅತ್ಯಂತ ಯಶಸ್ವಿಯಾಗಿ ಪರಿಸ್ಥಿತಿಯನ್ನು ನಿರ್ವಹಿಸಿತ್ತು. ನಮ್ಮ ಸೇನೆಯ ಬಗ್ಗೆ ಹೆಮ್ಮೆಯಿದೆ. ಆದರೆ, ಕೇಂದ್ರ ಸರ್ಕಾರವು ಇನ್ನಷ್ಟು ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗಾಣಿಸುವ ಅವಕಾಶವಿತ್ತು ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮಕ್ಕೆ, ತಾವೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಅಮೆರಿಕದ ಒತ್ತಡದಿಂದ ಕದನ ವಿರಾಮ ಸಾಧ್ಯವಾಯಿತು ಎನ್ನುವುದರ ಬಗ್ಗೆ, ನಮಗೆ ಸತ್ಯವಾದ ಮಾಹಿತಿ ಬೇಕು. ನಿನ್ನೆ ಭಾಷಣದಲ್ಲಿ ಪ್ರಧಾನಿ ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ, ಇದಕ್ಕೆ ತಿರುಗೇಟು ನೀಡುವ ಅವಕಾಶವಿತ್ತು. ಆದರೆ, ಈ ವಿಷಯದ ಕುರಿತು ಮಾತನಾಡದೇ, ಅವರು ಇದ್ದ ಅವಕಾಶವನ್ನು ಕಳೆದುಕೊಂಡರು ಎಂದರು.
ಪಾಕಿಸ್ತಾನವನ್ನು ಸಂಪೂರ್ಣವಾಗಿ ನಾಶಮಾಡಬೇಕಿತ್ತು ಎನ್ನುವ ಜೆಡಿಯು ನಾಯಕ ದಿವೇಶ್ ಚಂದ್ರ ಠಾಕೂರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ, ಅಜಾದ್ ʼದೇಶದೆಲ್ಲೆಡೆ ಕೇಳಿಬರುತ್ತಿರುವ ಜನರ ಭಾವನೆಯುಕ್ತ ಮಾತುಗಳನ್ನೇ ಅವರು ಕೂಡ ಹೇಳಿದ್ದಾರೆʼ. ಆದರೆ, ಭಾರತದ ಹೋರಾಟ ಪಾಕಿಸ್ತಾನದ ಮೇಲೆ ಅಲ್ಲ. ಅಲ್ಲಿರುವ ಭಯೋತ್ಪಾದಕರ ವಿರುದ್ಧ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವಾಗಲೂ ಹೇಳುತ್ತಿದ್ದಂತೆ, 'ದೇಶ ಮೊದಲು' ಎನ್ನುವ ಮಾತಿಗೆ ಬದ್ಧವಾಗಿದ್ದೇವೆ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.