ADVERTISEMENT

ಹೆಲಿಕಾಪ್ಟರ್ ಹಗರಣದ ಆರೋಪಪಟ್ಟಿಯಲ್ಲಿ ಲಂಚ ಪಡೆದವರ ಹೆಸರಿದೆ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 15:27 IST
Last Updated 5 ಏಪ್ರಿಲ್ 2019, 15:27 IST
ಡೆಹ್ರಾಡೂನಿನಲ್ಲಿ ನರೇಂದ್ರ ಮೋದಿ
ಡೆಹ್ರಾಡೂನಿನಲ್ಲಿ ನರೇಂದ್ರ ಮೋದಿ   

ಡೆಹ್ರಾಡೂನ್: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಯಾರು ಲಂಚ ತೆಗೆದುಕೊಂಡಿದ್ದಾರೆ ಎಂಬುದನ್ನು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.ನಿಮ್ಮ ಚೌಕೀದಾರದುಬೈನಿಂದ ಕೆಲವು ಮಧ್ಯವರ್ತಿಗಳನ್ನು ಹಿಡಿದುತಂದಿದ್ದಾನೆ. ತನಿಖಾ ಸಂಸ್ಥೆಗಳು ಈ ಇಟಲಿ ಮಾಮನನ್ನೂ, ಮತ್ತೊಬ್ಬ ಮಧ್ಯವರ್ತಿಯನ್ನೂ ಹಲವು ವಾರಗಳ ಕಾಲ ವಿಚಾರಣೆ ನಡೆಸಿವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ಅಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಕುರಿತು ಜಾರಿ ನಿರ್ದೇಶನಾಲಯ ದೆಹಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಇದೇ ಆರೋಪಪಟ್ಟಿಯನ್ನು ಆಧರಿಸಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ಚುನಾವಣಾ ರ‌್ಯಾಲಿಯಲ್ಲಿ ಮೋದಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಈಗಾಗಲೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ ಎಪಿ ಹಾಗೂ ಫ್ಯಾಮ್ ಎಂಬುವರಿಗೆ ಲಂಚ ಕೊಟ್ಟಿರುವುದಾಗಿ ಮಧ್ಯವರ್ತಿಗಳು ಹೇಳಿದ್ದಾರೆ. ಇವುಗಳ ಪ್ರಕಾರ ಎಪಿ ಎಂದರೆ ಅಹಮದ್ ಪಟೇಲ್, ಫ್ಯಾಮ್ ಎಂದರೆ ಫ್ಯಾಮಿಲಿ ಎಂದು ಹೇಳಲಾಗಿದೆ. ಇದೇ ಅಹಮದ್ ಪಟೇಲ್ ಉತ್ತರಾಖಂಡದ ಮುಖ್ಯಮಂತ್ರಿಗೆ ಆತ್ಮೀಯರು. ಈಗ ಹೇಳಿ ಇವರು ಯಾರ ಕುಟುಂಬಕ್ಕೆ ಹತ್ತಿರದವರು ಮತ್ತು ಯಾರಿಗೆ ಹಗರಣದ ಹಣ ತಲುಪಿದೆ ಎಂದು ಮೋದಿ ಹೇಳಿದರು.

ADVERTISEMENT

ಆರೋಪಪಟ್ಟಿಯಲ್ಲಿ ಯಾರ ಹೆಸರನ್ನೂ ಹೇಳಿಲ್ಲ-ವಕೀಲ

ಈ ಮಧ್ಯೆ ಹಗರಣದ ಮಧ್ಯವರ್ತಿ ಕ್ರಿಶ್ಟಿಯನ್ಮೈಕೆಲ್ ಪರ ವಕೀಲ ಅಲ್ಜೋ ಕೆ.ಜೋಸೆಫ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಮೈಕೆಲ್ ತನಿಖಾ ಸಂಸ್ಥೆಗಳಿಗೆ ಹೇಳಿಕೆ ನೀಡುವಾಗ ಯಾರ ಹೆಸರನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಷ್ಟು ಹೇಳಿದ ಮಾತ್ರಕ್ಕೆ ಮೋದಿ ಕೆಳಗಿಳಿಯುವ ದಿನಾಂಕ ಬದಲಾಗದು-ಕಾಂಗ್ರೆಸ್ ತಿರುಗೇಟು

ದೇಶದಲ್ಲಿ ಕಾಂಗ್ರೆಸ್ ಪರ ಅಲೆಯಿಂದಾಗಿ ಮೋದಿ ಸರ್ಕಾರ ಭೀತಿಗೊಂಡಿದೆ. ಯಾವುದೇ ಕಾರಣಕ್ಕೂ ಮೋದಿ ಅಧಿಕಾರದಿಂದ ಕೆಳಗಿಳಿಯುವ ದಿನಾಂಕವನ್ನು ಬದಲಾಯಿಸಲು ಸಾಧ್ಯವಿಲ್ಲ, ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ದೇಶದ ಜನರಿಂದ ತಿರಸ್ಕರಿಸಲ್ಪಟ್ಟಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲ ತಿರುಗೇಟು ನೀಡಿದ್ದಾರೆ.ಇದು ಸುಳ್ಳು ಆರೋಪ, ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಕಾಂಗ್ರೆಸ್ಸಿನ ಯಾರ ಹೆಸರೂ ಇಲ್ಲ. ಇದು ಕೀಳುಮಟ್ಟದ ಚುನಾವಣಾ ಗಿಮಿಕ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಾಕ್ಷಿಗಳು ಬಲವಾಗಿವೆ-ಬಿಜೆಪಿ

ಕಾಂಗ್ರೆಸ್ಸಿನ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಅರುಣ್ ಜೈಟ್ಲಿ, ಹಗರಣದಲ್ಲಿ ಬಲವಾದ ಸಾಕ್ಷ್ಯಗಳಿವೆ. ಅನುಮಾನದ ತೂಗುಗತ್ತಿ ಅವರತ್ತಲೇ ತೂಗುತ್ತಿದೆ ಎಂದಿದ್ದಾರೆ.

ಅಗಸ್ಟಾ ವೆಸ್ಟಲ್ಯಾಂಡ್ ಹಗರಣದಲ್ಲಿ ಆರೋಪಿದ ಮಧ್ಯವರ್ತಿ ಕ್ರಿಶ್ಟಿಯಲ್ ಮೇಕೆಲ್‌ನನ್ನು ಕಳೆದ ವರ್ಷ ದುಬೈನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿದೆ. ಆತನ ಹೇಳಿಕೆಗಳನ್ನು ಪಡೆದಿರುವ ಜಾರಿನಿರ್ದೇಶನಾಲಯ ಹೆಚ್ಚುವರಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಸಂಬಂಧ ಏಪ್ರಿಲ್ 6ರಂದು ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.