ADVERTISEMENT

ಕೇದಾರನಾಥ: ಪ್ರಧಾನಿ ಮೋದಿ ಧ್ಯಾನ ಮಾಡಿದ್ದ ಗುಹೆಯತ್ತ ಪ್ರವಾಸಿಗರ ಸೆಳೆತ

ಪಿಟಿಐ
Published 29 ಜೂನ್ 2019, 12:26 IST
Last Updated 29 ಜೂನ್ 2019, 12:26 IST
   

ಡೆಹ್ರಾಡೂನ್‌: ಕೇದಾರನಾಥ ದೇವಾಲಯ ಬಳಿಯ ಗುಹೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡಿದ ಬಳಿಕ ಅಲ್ಲಿ ಧ್ಯಾನ ಮಾಡಲು ಆಸಕ್ತಿ ತೋರುವವರ ಸಂಖ್ಯೆ ಹೆಚ್ಚಾಗಿದೆ.

ಗುಹೆಯನ್ನು ‘ಗರ್ವಾಲ್‌ ಮಂಡಲ್‌ ವಿಕಾಸ್‌ ನಿಗಮ್‌ ಲಿಮಿಟೆಡ್‌’ (ಜಿಎಂವಿಎನ್‌) ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಕಾಯ್ದಿರಿಸುವವರು ಹೆಚ್ಚಾಗಿದ್ದಾರೆ.

ಈಗಾಗಲೇ ಜುಲೈ ತಿಂಗಳ ಪೂರ್ತಿ ‘ಧ್ಯಾನಗುಹೆ‘ ಬುಕ್ ಆಗಿದ್ದು, ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನ ಕೆಲ ದಿನಾಂಕಗಳು ಮುಂಗಡ ಬುಕ್‌ ಆಗಿವೆ ಎಂದು ಜಿಎಂವಿಎನ್‌ ಪ್ರಧಾನ ವ್ಯವಸ್ಥಾಪಕ ಬಿ.ಎಲ್‌.ರಾಣಾ ತಿಳಿಸಿದ್ದಾರೆ.

‘ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಈ ಗುಹೆಯಲ್ಲಿ ಧ್ಯಾನ ಮಾಡಿದ ಬಳಿಕ ಒಂದು ದಿನವೂ ಈ ಗುಹೆ ಖಾಲಿ ಉಳಿದಿಲ್ಲ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಸುಮಾರು 12,500 ಅಡಿ ಎತ್ತರದಲ್ಲಿರುವ ಈ ಪ್ರದೇಶದ ಸುತ್ತಮುತ್ತ ಇನ್ನೂ ಮೂರು ಧ್ಯಾನ ಗುಹೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಅದರಲ್ಲಿ ಒಂದರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇನ್ನೆರಡು ಗುಹೆಗಳಿಗೆ ಜಾಗವನ್ನು ಅಂತಿಮಗೊಳಿಸಬೇಕಿದೆ’ ಎಂದು ರುದ್ರಪ್ರದ್ರಯಾಗ್‌ನ ಜಿಲ್ಲಾಧಿಕಾರಿ ಮಂಗೇಶ್ ಘಿಲ್ಡಿಯಾಲ್ ತಿಳಿಸಿದ್ದಾರೆ.

ಈ ‘ಗುಹೆ’ಯಲ್ಲಿ ಧ್ಯಾನಕ್ಕೆ ವರ್ಷದ ಹಿಂದೆಯಷ್ಟೇ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಪ್ರಧಾನಿ ಭೇಟಿ ನಂತರ ಇಲ್ಲಿಗೆ ಬರಲು ಆಸಕ್ತಿ ತೋರುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಅವರು.

ಮೋದಿ ಅವರು ಈ ಗುಹೆಯಲ್ಲಿ ಧ್ಯಾನಕ್ಕೆ ಕುಳಿತ ಫೋಟೊಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದ್ದವು. ನಂತರ ಈ ಗುಹೆ ಪ್ರವಾಸಿಗರನ್ನು ಸೆಳೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.