ಮಾಲೆಗಾಂವ್ ಸ್ಫೋಟ ನಡೆದ ಸ್ಥಳ, ಮೋಹನ ಭಾಗವತ್
ಪುಣೆ: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ ಭಾಗವತ್ ಅವರನ್ನು ಬಂಧಿಸುವಂತೆ ಸೂಚನೆ ಇತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ (ATS) ಮಾಜಿ ಅಧಿಕಾರಿ ಮೆಹಿಬೂಬ್ ಮುಜಾವರ್ ಹೇಳಿದ್ದಾರೆ.
2008ರ ಸೆ. 29ರಂದು ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ 7 ಆರೋಪಿಗಳನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದ್ದರ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಈ ಪ್ರಕರಣದ ಹಿಂದೆ ಕೇಸರಿ ಭಯೋತ್ಪಾದನೆ ಇತ್ತು ಎಂಬುದನ್ನು ಸಾಬೀತುಪಡಿಸುವ ಉದ್ದೇಶವಿತ್ತು. ಸುಳ್ಳು ಕಥೆಗಳನ್ನು ಎಟಿಎಸ್ ಹೆಣೆದಿದೆ ಎಂದು ನ್ಯಾಯಾಲಯ ಹೇಳಿದೆ’ ಎಂದಿದ್ದಾರೆ.
‘ಘಟನೆ ನಡೆದಾಗ ಎಟಿಎಸ್ ಈ ಪ್ರಕರಣದ ತನಿಖೆ ನಡೆಸಿತ್ತು. ನಂತರದ ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಆರಂಭಿಸಿತು. ನಕಲಿ ತನಿಖೆಯನ್ನು ನಕಲಿ ಅಧಿಕಾರಿಯೊಬ್ಬರು ನಡೆಸಿದ್ದಾರೆ ಎಂಬುದನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ’ ಎಂದು ಮುಜಾವರ್ ಹೇಳಿದ್ದಾರೆ.
‘ನಾನೂ ಈ ಪ್ರಕರಣದ ತನಿಖಾ ತಂಡದಲ್ಲಿದ್ದೆ. ‘ಹೋಗಿ ಮೋಹನ್ ಭಾಗವತ್ ಅವರನ್ನು ಬಂಧಿಸಿ ಕರೆತನ್ನಿ’ ಎಂದು ಮೇಲಿನಿಂದ ಆದೇಶ ಬಂತು. ಎಟಿಎಸ್ ಯಾವ ರೀತಿಯಲ್ಲಿ ತನಿಖೆ ನಡೆಸಿತು ಮತ್ತು ಏಕೆ ಎಂಬುದನ್ನು ನಾನು ಹೇಳಲಾರೆ, ಆದರೆ ರಾಮ್ ಕಾಲಸಂಗ್ರ, ಸಂದೀಪ್ ದಾಂಗೆ, ದಿಲೀಪ್ ಪಾಟೀದಾರ್ ಮತ್ತು ಮೋಹನ ಭಾಗವತ್ ಅವರನ್ನು ಬಂಧಿಸಿ ಕರೆತರುವಂತೆ ಆದೇಶಿಸಲಾಗಿತ್ತು. ಇವು ಪಾಲಿಸಲು ಸಾಧ್ಯವಿಲ್ಲ ಆದೇಶಗಳಾಗಿದ್ದವು’ ಎಂದಿದ್ದಾರೆ.
‘ಮೋಹನ ಬಾಗವತ್ ಅವರನ್ನು ಬಂಧಿಸಿ ಕರೆತರುವುದು ನನ್ನ ಸಾಮರ್ಥ್ಯಕ್ಕೂ ಮೀರಿದ್ದಾಗಿತ್ತು. ನಾನು ಆ ಆದೇಶವನ್ನು ಪಾಲಿಸಲಿಲ್ಲ. ಅದಕ್ಕಾಗಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಯಿತು. ನನ್ನ 40 ವರ್ಷದ ವೃತ್ತಿ ಬದುಕನ್ನೇ ನಾಶ ಮಾಡಿದರು. ಹಿಂದೂ ಭಯೋತ್ಪಾದನೆ ಎಂಬುದು ಇರಲೇ ಇಲ್ಲ. ಅವೆಲ್ಲವೂ ಸುಳ್ಳು’ ಎಂದು ಮುಜಾವರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.