ನವದೆಹಲಿ: ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೊಸ ಪಕ್ಷವು ರಾಜ್ಯದಲ್ಲಿ ಕಾಂಗ್ರೆಸ್ಗೆ ಹೊಡೆತ ನೀಡಲಿದೆ ಎಂದು ‘ಎಬಿಪಿ–ಸಿ–ವೋಟರ್–ಐಎಎನ್ಎಸ್’ ಸಮೀಕ್ಷಾ ವರದಿ ಹೇಳಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಶೇ 52.1ರಷ್ಟು ಮಂದಿ ಅಮರಿಂದರ್ ಪಕ್ಷದಿಂದ ಕಾಂಗ್ರೆಸ್ಗೆ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರೆ, ಶೇ 47.9 ಮಂದಿ ತೊಂದರೆಯಾಗದು ಎಂದು ಹೇಳಿದ್ದಾರೆ.
ಎಎಪಿಯು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬೇಕು ಎಂದು ಶೇ 77.3 ಮಂದಿ ಅಭಿಪ್ರಾಯಪಟ್ಟಿದ್ದರೆ, ಶೇ 22.7 ಮಂದಿ ಬೇಡ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಅಮರಿಂದರ್ ಸಿಂಗ್ ಹೊಸ ಪಕ್ಷ ಮೈತ್ರಿ ಮಾಡಿಕೊಂಡರೆ ಕೇಸರಿ ಪಕ್ಷಕ್ಕೆ ಲಾಭವಾಗಲಿದೆ ಎಂದು ಶೇ 34.6 ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ನ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಾಗೂ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ನಡುವಣ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಶೇ 62.2 ಮಂದಿ ಹೇಳಿದ್ದಾರೆ. ಆದರೆ ಉಭಯ ನಾಯಕರ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ತೊಂದರೆಯಾಗದು ಎಂದು ಶೇ 37.8 ಮಂದಿ ಪ್ರತಿಕ್ರಿಯಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ನಿರುದ್ಯೋಗವೇ ಮುಖ್ಯ ವಿಷಯವಾಗಲಿದೆ ಎಂದು ಶೇ 38.3 ಮಂದಿ ಪ್ರತಿಕ್ರಿಯಿಸಿದ್ದು, ರೈತರ ಪ್ರತಿಭಟನೆ ಮುಖ್ಯವಾಗಲಿದೆ ಎಂದು ಶೇ 38.1 ಮಂದಿ ಅಭಿಪ್ರಾಯಪಟ್ಟಿದ್ದಾರೆ.
ನವಜೋತ್ ಸಿಧು ಅವರೊಂದಿಗಿನ ತೀವ್ರ ಸಂಘರ್ಷದ ಬಳಿಕ ಅಮರಿಂದರ್ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಚರಣಜಿತ್ ಸಿಂಗ್ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದ ಅಮರಿಂದರ್ ಸಿಂಗ್, ‘ಪಂಜಾಬ್ ಲೋಕ್ ಕಾಂಗ್ರೆಸ್’ ಸ್ಥಾಪನೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.