ಇಂದೋರ್: ಕೋವಿಡ್ ಸಾಂಕ್ರಾಮಿಕದ ವೇಳೆ ವಿನಿಯೋಗಿಸಿರುವ ಅನುದಾನದ ಕುರಿತು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಕೇಳಿದ್ದ ಪ್ರಶ್ನೆಗೆ ಬರೋಬ್ಬರಿ 40 ಸಾವಿರ ಪುಟಗಳ ಉತ್ತರ ನೀಡಿದ್ದು, ಇದನ್ನು ನೋಡಿ ಪ್ರಶ್ನೆ ಕೇಳಿದ್ದ ಮಧ್ಯಪ್ರದೇಶದ ಇಂದೋರ್ನ ಧರ್ಮೇಂದ್ರ ಶುಕ್ಲಾ ದಂಗಾಗಿದ್ದಾರೆ.
‘ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಔಷಧ, ಉಪಕರಣ ಮತ್ತಿತರ ವಸ್ತುಗಳನ್ನು ಖರೀದಿಸಿರುವುದಕ್ಕೆ ಸಂಬಂಧಿಸಿದ ಟೆಂಡರ್ ಮತ್ತು ಬಿಲ್ ಪಾವತಿ ಕುರಿತು ಇಂದೋರ್ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ (ಸಿಎಂಎಚ್ಒ) ಕೇಳಿದ ಪ್ರಶ್ನೆಗೆ ಈ ಉತ್ತರ ಲಭಿಸಿದೆ’ ಎಂದು ಶುಕ್ಲಾ ಅವರು ಶನಿವಾರ ತಿಳಿಸಿದ್ದಾರೆ.
ಒಂದು ತಿಂಗಳೊಳಗೆ ಉತ್ತರ ಲಭಿಸದ ಕಾರಣ ಧರ್ಮೇಂದ್ರ ಅವರು ಮೇಲ್ಮನವಿ ಅಧಿಕಾರಿ ಡಾ. ಶರದ್ ಗುಪ್ತಾ ಅವರಿಗೆ ಅರ್ಜಿ ಸಲ್ಲಿಸಿದ್ದರು. ಪರಿಶೀಲನೆ ನಡೆಸಿದ ಅವರು ಯಾವುದೇ ಶುಲ್ಕ ಪಡೆಯದೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದರು. ಹೀಗಾಗಿ ಶುಕ್ಲಾ ಅವರು ಉತ್ತರದ ಪ್ರತಿ ಪುಟಕ್ಕೆ ನಿಗದಿತ ₹2 ಅನ್ನು ಪಾವತಿಸಿಲ್ಲ.
‘ನನಗೆ ನೀಡಿರುವ ದಾಖಲೆಯನ್ನು ತರಲು ನಾನು ಎಸ್ಯುವಿ ವಾಹನವನ್ನು ಕೊಂಡೊಯ್ದಿದ್ದೆ ಅದರಲ್ಲಿ ಚಾಲಕನ ಆಸನವನ್ನು ಬಿಟ್ಟು ಉಳಿದೆಡೆ ದಾಖಲೆಗಳನ್ನು ತುಂಬಿಸಿಕೊಂಡು ಬಂದೆ’ ಎಂದಿದ್ದಾರೆ.
ಸಕಾಲಕ್ಕೆ ಮಾಹಿತಿ ನೀಡದೆ ರಾಜ್ಯದ ಬೊಕ್ಕಸಕ್ಕೆ ₹80 ಸಾವಿರ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಡಾ. ಶರದ್ ಗುಪ್ತಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.