
ಉದ್ಯಮಿ ಮುಕೇಶ್ ಅಂಬಾನಿ
ಅಮರಾವತಿ: ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಇಂದು ಆಂಧ್ರ ಪ್ರದೇಶದಲ್ಲಿರುವ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ನಸುಕಿನ ಮುಂಜಾನೆ ಸುಪ್ರಭಾತ ಸೇವೆ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿದರು. ಟಿಟಿಡಿ ಅಧಿಕಾರಿಗಳು ಮುಕೇಶ್ ಅವರನ್ನು ಬರಮಾಡಿಕೊಂಡರು.
ಇದಕ್ಕೂ ಮುನ್ನ ಅಂಬಾನಿ ಅವರು ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ದೇವಸ್ಥಾನದ ಆನೆಗಳಿಗೆ ಆಧುನಿಕ ಪಶು ಆಸ್ಪತ್ರೆ ನಿರ್ಮಾಣಕ್ಕಾಗಿ ₹15 ಕೋಟಿ ದೇಣಿಗೆಯನ್ನೂ ನೀಡಿದರು.
ಮುಕೇಶ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿರುವ ಚಿತ್ರಗಳನ್ನು ಗುರುವಾಯೂರು ದೇವಸ್ವಂ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ.
ಹೆಲಿಕಾಪ್ಟರ್ನಲ್ಲಿ ಮುಂಜಾನೆ 7.30ಕ್ಕೆ ಬಂದಿಳಿದ ಮುಕೇಶ್ ಅವರು ನಂತರ ರಸ್ತೆ ಮಾರ್ಗವಾಗಿ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ದೇವಸ್ವಂ ಅಧ್ಯಕ್ಷ ಡಾ ವಿ.ಕೆ ವಿಜಯನ್ ಹಾಗೂ ಇತರರು ಅವರನ್ನು ಬರಮಾಡಿಕೊಂಡರು. ಬಳಿಕ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.
ಆಸ್ಪತ್ರೆಗಳ ನಿರ್ಮಾಣದ ಯೋಜನೆ ಕುರಿತು ದೇವಸ್ವಂ ಅಧಿಕಾರಿಗಳು ಮುಕೇಶ್ ಅವರಿಗೆ ಮಾಹಿತಿ ನೀಡಿದರು. ಎರಡೂ ಯೋಜನೆಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಅವರು, ಮೊದಲ ಹಂತದಲ್ಲಿ ₹15 ಕೋಟಿ ನೀಡಿದ್ದಾರೆ.
ಗುರುವಾಯೂರು ಆನೆಗಳ ಆರೈಕೆ ಹಾಗೂ ನಿರ್ವಹಣೆಗಾಗಿ, ಗುಜರಾತ್ನಲ್ಲಿರುವ ರಿಲಯನ್ಸ್ ವನ್ಯಜೀವಿ ಸಂರಕ್ಷಣಾ ಕೇಂದ್ರದ ಮಾದರಿಯಲ್ಲಿ ತಾಂತ್ರಿಕ ನೆರವು ನೀಡುವುದಾಗಿಯೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.