ADVERTISEMENT

ಮಗುವಿನ ಚಿಕಿತ್ಸೆಗಾಗಿ ಅನಾಮಧೇಯನಿಂದ ₹15.31 ಕೋಟಿ ನೆರವು

ಪಿಟಿಐ
Published 23 ಫೆಬ್ರುವರಿ 2023, 8:41 IST
Last Updated 23 ಫೆಬ್ರುವರಿ 2023, 8:41 IST
   

ಮುಂಬೈ: ಇತ್ತೀಚೆಗೆ ಕೇರಳಕ್ಕೆ ಸ್ಥಳಾಂತರಗೊಂಡಿರುವ ಮುಂಬೈನ ದಂಪತಿ ತಮ್ಮ 16 ತಿಂಗಳ ಮಗುವಿನ ಚಿಕಿತ್ಸೆಗಾಗಿ ಜೀವರಕ್ಷಕ ಔಷಧವನ್ನು ಖರೀದಿಸಲು ದೇಣಿಗೆ ಸಂಗ್ರಹಿಸುತ್ತಿದ್ದು, ಅನಾಮಧೇಯ ದಾನಿಯೊಬ್ಬರು ₹15.31 ಕೋಟಿ ನೆರವು ನೀಡಿ ಅಚ್ಚರಿ ಮೂಡಿಸಿದ್ದಾರೆ.

ಮೆರೈನ್ ಇಂಜಿನಿಯರ್ ಸಾರಂಗ್ ಮೆನನ್ ಮತ್ತು ಅದಿತಿ ನಾಯರ್ ಅವರ ಪುತ್ರ ನಿರ್ವಾಣ್, ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ರೋಗದಿಂದ ಬಳಲುತ್ತಿದ್ದಾನೆ. ಇದು ಮೆದುಳಿನ ಅಪರೂಪದ ಕಾಯಿಲೆಯಾಗಿದ್ದು, ಇದರ ಚಿಕಿತ್ಸೆಯ ಪ್ರಮುಖ ಔಷಧದ ಬೆಲೆ ಸುಮಾರು ₹ 17.3 ಕೋಟಿ. ಹೀಗಾಗಿ ದಂಪತಿ ಸಾಮಾಜಿಕ ಮಾಧ್ಯಮದಲ್ಲಿನ ಕ್ರೌಡ್‌ಫಂಡಿಂಗ್‌ ವೇದಿಕೆ ಮಿಲಾಪ್‌ನಲ್ಲಿ ನೆರವು ಕೋರಿದ್ದರು.

ಸಾಕಷ್ಟು ನೆರವು ಹರಿದು ಬಂದಿದೆ. ಅನಾಮಧೇಯರೊಬ್ಬರು 1.4 ಶತಕೋಟಿ ಡಾಲರ್‌ ನೆರವು ನೀಡಿದ್ದಾರೆ. ದೊಡ್ಡ ಮೊತ್ತ ನೀಡಿದ ವ್ಯಕ್ತಿಯ ಪರಿಚಯವಿಲ್ಲ ಎಂದು ಅದಿತಿ ನಾಯರ್ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಕ್ರೌಡ್‌ಫಂಡಿಂಗ್ ಪುಟ ಪ್ರಾರಂಭಿಸಿದಾಗ ಮೆನನ್ ನಿಗದಿಪಡಿಸಿದ ಗುರಿ ₹17.50 ಕೋಟಿ. ‘ಈ ಬೃಹತ್‌ ದೇಣಿಗೆಯು ನಮ್ಮನ್ನು ಗುರಿಯ ಹತ್ತಿರಕ್ಕೆ ಕೊಂಡೊಯ್ದಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಉಳಿದ ಮೊತ್ತವನ್ನು ನಾವುಸಂಬಂಧಿಕರು ಮತ್ತು ಸ್ನೇಹಿತರ ಮೂಲಕ ಸಂಗ್ರಹಿಸುತ್ತೇವೆ’ ಎಂದು ಅವರು ಹೇಳಿದರು.

‘ಆದಾಗ್ಯೂ, ಕೆಲವು ಕಡ್ಡಾಯ ಪರೀಕ್ಷೆಗಳು ಮತ್ತು ಅಮೆರಿಕದಿಂದ ಮುಂಬೈಗೆ ಔಷಧ ಬರಲು ಸಮಯ ಬೇಕು. ಹೀಗಾಗಿ ಮಗುವಿನ ಚಿಕಿತ್ಸೆಗೆ ಕನಿಷ್ಠ 2-3 ವಾರಗಳು ಬೇಕಾಗುತ್ತದೆ’ ಎಂದು ನಾಯರ್ ಮಾಹಿತಿ ನೀಡಿದರು.

ಔಷಧ ತರಿಸಿಕೊಳ್ಳಲು ಅಗತ್ಯ ಅನುಮತಿಗಾಗಿ ನಾಯರ್‌ ಕುಟುಂಬವು ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆಮದು-ರಫ್ತು ಇಲಾಖೆಯನ್ನು ಸಂಪರ್ಕಿಸಿದೆ. ಹಿಂದೂಜಾ ಆಸ್ಪತ್ರೆಯ ಮಕ್ಕಳ ನರರೋಗ ತಜ್ಞ ಡಾ.ನೀಲು ದೇಸಾಯಿ ಅವರು ನಿರ್ವಾಣ್‌ಗೆ ಚಿಕಿತ್ಸೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.