ಮುಂಬೈನ ರಸ್ತೆಯೊಂದರಲ್ಲಿ ನೀರು ತುಂಬಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡಿದರು.
-ಪಿಟಿಐ ಚಿತ್ರ
ಮುಂಬೈ: ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಆರು ಮಕ್ಕಳು ಮತ್ತು ಇಬ್ಬರು ಸಿಬ್ಬಂದಿಯಿದ್ದ ಶಾಲಾ ವಾಹನವೊಂದು ಜಲಾವೃತಗೊಂಡಿದ್ದ ರಸ್ತೆಯಲ್ಲಿ ಸೋಮವಾರ ಸಿಲುಕಿಕೊಂಡಿತ್ತು.
ಮುಂಬೈನ ಮಾಟುಂಗಾ ಪ್ರದೇಶದಲ್ಲಿ ಜಲಾವೃತಗೊಂಡಿದ್ದ ರಸ್ತೆಯಲ್ಲಿ ಖಾಸಗಿ ಶಾಲಾ ವಾಹನವೊಂದು ಅರ್ಧ ಗಂಟೆಗೂ ಹೆಚ್ಚು ಕಾಲ ಸಿಲುಕಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಅವರನ್ನು ರಕ್ಷಿಸಿ, ಮಟುಂಗಾ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ಮಹಾನಗರ ಪಾಲಿಕೆಯು ಎಲ್ಲ ಶಾಲಾ– ಕಾಲೇಜುಗಳಿಗೆ ಸೋಮವಾರ 12 ಗಂಟೆ ಬಳಿಕ ರಜೆ ಘೋಷಿಸಿದೆ.
ಸಂಚಾರಕ್ಕೆ ಅಡ್ಡಿ: ನಿರಂತರವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈನ ಕೆಲವು ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಬಂದರು ಮಾರ್ಗದ ಕೆಲವು ತಗ್ಗು ಪ್ರದೇಶಗಳಲ್ಲಿ ರೈಲು ಹಳಿಗಳ ಮೇಲೆ ನೀರು ನಿಂತಿದ್ದರಿಂದ ಮುಂಬೈನ ಸ್ಥಳೀಯ ರೈಲುಗಳು 10 ನಿಮಿಷ ತಡವಾಗಿ ಸಂಚಾರ ನಡೆಸಿವೆ. ಒಂಬತ್ತು ವಿಮಾನಗಳು ನಿಗದಿತ ಸಮಯಕ್ಕೆ ಭೂಸ್ಪರ್ಶ ಮಾಡಿಲ್ಲ. ಒಂದು ವಿಮಾನದ ಮಾರ್ಗ ಬದಲಾವಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಾವೃತಗೊಂಡ ಕಾರಣ ಅಂಧೇರಿ ಸುರಂಗಮಾರ್ಗದಲ್ಲಿ ಸೋಮವಾರ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
‘ರೆಡ್ ಅಲರ್ಟ್’ ಘೋಷಣೆ: ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಮುಂಬೈ, ಠಾಣೆ ಮತ್ತು ರಾಯಗಢ ಜಿಲ್ಲೆಗಳಿಗೆ ಮಂಗಳವಾರ ಮತ್ತು ಬುಧವಾರವು ‘ರೆಡ್ ಅಲರ್ಟ್’ ಘೋಷಣೆ ಮಾಡಿದೆ.
ಆಸ್ಪತ್ರೆಗೆ ನುಗ್ಗಿದ ನೀರು: ಮುಂಬೈನ ಅನೇಕ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು, ಮುಂಬೈ ಮಹಾನಗರ ಪಾಲಿಕೆಯ ಮಾ ಜನರಲ್ ಆಸ್ಪತ್ರೆಯಲ್ಲಿ ರೋಗಿಗಳನ್ನು ಬೆನ್ನಿನ ಮೇಲೆ ಹೊತ್ತು ಸ್ಥಳಾಂತರಿಸಲಾಯಿತು.
ಐವರು ನಾಪತ್ತೆ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಐವರು ಕಾಣೆಯಾಗಿದ್ದಾರೆ. 200ಕ್ಕೂ ಹೆಚ್ಚು ಗ್ರಾಮಸ್ಥರು ಸಂಕಷ್ಟದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.