ಕೊಚ್ಚಿ: ಮುನಂಬಂ ಭೂ ತಕರಾರು ಸಂಬಂಧ ರಾಜ್ಯ ಸರ್ಕಾರ ರಚಿಸಿದ ನ್ಯಾಯಾಂಗ ಆಯೋಗವನ್ನು ರದ್ದು ಮಾಡಿದ ಏಕಪೀಠ ಸದಸ್ಯದ ತೀರ್ಪಿಗೆ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ ತಡೆ ನೀಡಿದೆ.
ಪ್ರಕರಣ ಸಂಬಂಧ ರಚಿಸಲಾಗಿದ್ದ ನ್ಯಾಯಾಂಗ ಆಯೋಗವನ್ನು ರದ್ದು ಮಾಡಿ ಏಕಸದಸ್ಯ ಪೀಠ ಮಾರ್ಚ್ 17ರಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ನಿತಿನ್ ಜಾಮದಾರ್ ಹಾಗೂ ನ್ಯಾಯಮೂರ್ತಿ ಎಸ್. ಮನು ಅವರಿದ್ದ ಪೀಠ ಏಕಸದಸ್ಯ ಪೀಠದ ತೀರ್ಪಿಗೆ ತಾತ್ಕಾಲಿಕ ತಡೆ ನೀಡಿದೆ.
ಮುಂದಿನ ಆದೇಶದವರೆಗೂ ಆಯೋಗ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಬಹುದು ಎಂದು ಆದೇಶದಲ್ಲಿ ಕೋರ್ಟ್ ತಿಳಿಸಿದೆ. ಬೇಸಿಗೆ ರಜೆ ಕಳೆದ ಬಳಿಕ ಅರ್ಜಿಯ ವಿಚಾರಣೆ ಮುಂದುವರಿಯಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇರಳ ಕಾನೂನು ಸಚಿವ ಪಿ. ರಾಜೀವ್, ಕೋರ್ಟ್ ಆದೇಶದಿಂದಾಗಿ ಆಯೋಗ ತನ್ನ ಕೆಲಸ ಮುಂದುವರಿಸಬಹುದಾಗಿದ್ದು, ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು. ಏಕಸದಸ್ಯ ಪೀಠದ ತೀರ್ಪಿನಿಂದಾಗಿ ಆಯೋಗಕ್ಕೆ ತನಿಖೆ ನಡೆಸಲು ಬೇಕಾದಷ್ಟು ಸಮಯ ಸಿಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ವಿವಾದಿತ ಸ್ಥಳದಿಂದ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ತಮ್ಮ ಬಳಿ ದಾಖಲೆಗಳಿದ್ದರೂ ವಕ್ಫ್ ಬೋರ್ಡ್ ತನ್ನ ಭೂಮಿ ಎಂದು ಕಾನೂನು ಬಾಹಿರವಾಗಿ ಹೇಳುತ್ತಿದೆ ಎಂದು ಎರ್ನಾಕುಳಂ ಜಿಲ್ಲೆಯ ಮುನಂಬಂನ ಚೆರಾರಿ ಗ್ರಾಮಸ್ಥರು ಆರೋಪಿಸಿದ್ದರು. ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಳ್ಳುವ ಭೂಮಿಯ ದಾಖಲೆಗಳು ಹಾಗೂ ಕಂದಾಯ ರಸೀದಿಗಳು ನಮ್ಮ ಬಳಿ ಇವೆ ಎಂದು ಗ್ರಾಮಸ್ಥರು ಹೇಳಿದ್ದರು.
ಈ ಬಗ್ಗೆ ವಿವಾದಿತ ಸ್ಥಳದ ಸತ್ಯಶೋಧನೆಗೆ ಕೇರಳ ಸರ್ಕಾರವು ಕಳೆದ ವರ್ಷ ನವೆಂಬರ್ನಲ್ಲಿ ಕೇರಳ ಹೈಕೋರ್ಟ್ನ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಿ.ಎನ್ ರಾಮಚಂದ್ರ ನಾಯರ್ ನೇತೃತ್ವದಲ್ಲಿ ನ್ಯಾಯಾಂಗವನ್ನು ಆಯೋಗ ರಚಿಸಿತ್ತು.
ಎರ್ನಾಕುಳಂನ ಕೇರಳ ವಕ್ಫ್ ಸಂರಕ್ಷಣಾ ವೇದಿ ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.