ADVERTISEMENT

ಹಿಂದೂ ಮಹಿಳೆಯನ್ನು ಮತಾಂತರಿಸಿ, ವೇಶ್ಯಾವಾಟಿಕೆಗೆ ತಳ್ಳಿದ ಮುಸ್ಲಿಂ ವ್ಯಕ್ತಿ!

ಪಿಟಿಐ
Published 23 ಜುಲೈ 2025, 11:21 IST
Last Updated 23 ಜುಲೈ 2025, 11:21 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

(ಸಾಂದರ್ಭಿಕ ಚಿತ್ರ)

ಬರೇಲಿ: ಹಿಂದೂ ಧರ್ಮಕ್ಕೆ ಸೇರಿದ ಮಹಿಳೆಯೊಬ್ಬರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ಗೋಮಾಂಸ ತಿನ್ನಿಸಿ ಆಕೆಯನ್ನು ವೇಶ್ಯಾವಾಟಿಕೆಗೆ ದೂಡಿದ ಆರೋಪದಡಿ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೋಲ್ಕತ್ತ ಮೂಲದ ಸಂತ್ರಸ್ತೆ ಒಂದು ವರ್ಷದ ಹಿಂದೆ ಕೆಲಸ ಹುಡುಕಿಕೊಂಡು ಉತ್ತರಾಖಂಡದ ರುದ್ರಪುರಕ್ಕೆ ಬಂದಿದ್ದರು. ಆಗ ಸಾಮಾಜಿಕ ಮಾಧ್ಯಮದ ಮೂಲಕ ‘ರಾಜವೀರ್’ ಎಂದು ಗುರುತಿಸಿಕೊಂಡು ವ್ಯಕ್ತಿಯೊಬ್ಬರ ಪರಿಚಯವಾಗಿತ್ತು ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ.

‘ಆತ ಮದುವೆಯಾಗುವ ನೆಪದಲ್ಲಿ ನನ್ನ ಹಣೆಗೆ ‘ಸಿಂಧೂರ’ (ಕುಂಕುಮ) ಹಚ್ಚಿದ್ದ. ನೀನೇ ನನ್ನ ಹೆಂಡತಿ ಎಂದು ಹೇಳಿಕೊಂಡು ನನ್ನೊಂದಿಗೆ ಸಂಬಂಧ ಬೆಳೆಸಿದ್ದ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

‘ಸುಮಾರು ಒಂಬತ್ತು ತಿಂಗಳ ಹಿಂದೆ ಆ ವ್ಯಕ್ತಿಯ ನಿಜವಾದ ಹೆಸರು ‘ಬಖ್ತಾವರ್’ ಎಂದು ತಿಳಿಯಿತು. ಇದೇ ವೇಳೆ ಆತ ನನ್ನನ್ನು ಉತ್ತರಾಖಂಡದ ರುದ್ರಪುರದಿಂದ ಉತ್ತರ ಪ್ರದೇಶದ ಬರೇಲಿಯ ಬಹೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂದನ್‌ಪುರ್ ಶುಮಾಲಿ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ನನ್ನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ನನ್ನ ಇಚ್ಛೆಗೆ ವಿರುದ್ಧವಾಗಿ ಗೋಮಾಂಸ ಸೇವಿಸುವಂತೆ ಒತ್ತಾಯಿಸಿದ್ದ. ಬಳಿಕ ಆತ ನನ್ನನ್ನು ವೇಶ್ಯಾವಾಟಿಕೆಗೆ ದೂಡಿದ’ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಅರುಣ್ ಕುಮಾರ್ ತಿಳಿಸಿದ್ದಾರೆ.

‘ಅನೇಕ ಮುಸ್ಲಿಂ ಪುರುಷರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆರೋಪಿ ಬಖ್ತಾವರ್ ನನ್ನನ್ನು ಲವ್ ಜಿಹಾದ್‌ನಲ್ಲಿ ಸಿಲುಕಿಸಿದ್ದಾನೆ’ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಆರೋಪಿಯು ಉತ್ತರ ಪ್ರದೇಶದ ಅಕ್ರಮ ಮತಾಂತರ ಪ್ರಕರಣದ ಮುಖ್ಯ ಆರೋಪಿ ಜಲಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾ ಜತೆಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ ಎಂದು ಅರುಣ್ ಕುಮಾರ್ ವಿವರಿಸಿದ್ದಾರೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಬಹೇರಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.