ಪಟ್ನಾ:ಹಿಂದೂ ದೇವತೆಗಳ ಕುರಿತು ಬಿಹಾರದ ಬಿಜೆಪಿ ಶಾಸಕ ಲಲನ್ ಪಾಸ್ವಾನ್ ಅವರು ನೀಡಿರುವ ಹೇಳಿಯೊಂದು ವಿವಾದಕ್ಕೆ ಗ್ರಾಸವಾಗಿದ್ದು, ಬಿಜೆಪಿಗೆ ಮುಜುಗರ ಉಂಟುಮಾಡಿದೆ.ಲಕ್ಷ್ಮೀ, ಸರಸ್ವತಿ, ಹನುಮಂತನನ್ನು ಆರಾಧಿಸುವುದರಿಂದ ಸಿಗುವ ಭಾಗ್ಯವು ಈ ದೇವತೆಗಳನ್ನು ಆರಾಧಿಸದೇ ಇರುವವರಿಗೂ ಸಿಗುತ್ತದೆ ಎಂದು ಪಿರ್ಪೈಂತಿ ವಿಧಾನಸಭೆ ಶಾಸಕರಾದ ಲಲನ್ ಹೇಳಿದ್ದರು.
ಲಲನ್ ಅವರ ತಾಯಿ ವಾರದ ಹಿಂದೆ ಮರಣಹೊಂದಿದ್ದರು. ಅವರ ಗೌರವಾರ್ಥವಾಗಿ ‘ಮೃತ್ಯುಭೋಜ್’ (ಸಮಾರಾಧನೆಯ ಔತಣ) ಏರ್ಪಡಿಸುವುದನ್ನು ನಿರಾಕರಿಸಿದ್ದ ಅವರು, ತಮ್ಮದು ಕ್ರಾಂತಿಕಾರಿ ನಿಲುವು ಎಂದು ತೋರ್ಪಡಿಸುವ ಬರದಲ್ಲಿ ಈ ಹೇಳಿಕೆ ನೀಡಿದ್ದರು.
ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು ಮತ್ತು ಸುದ್ದಿ ವಾಹಿನಿಗಳು ಈ ವಿಡಿಯೊವನ್ನು ಪ್ರಸಾರ ಮಾಡಿದವು. ‘ದೇವತೆಯರಾದ ಸರಸ್ವತಿ, ಲಕ್ಷ್ಮಿಯನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಪೂಜಿಸುವುದಿಲ್ಲ. ಇದರಿಂದ ಆ ಸಮುದಾಯದ ಜನರಿಗೆ ಹಣ, ಶಿಕ್ಷಣ ನಿರಾಕರಿಸಲಾಗಿದೆಯೇ?ಬಜರಂಗ ಬಲಿಯನ್ನು ಅಮೆರಿಕದಲ್ಲಿ ಆರಾಧಿಸುವುದಿಲ್ಲ ಆದರೂ ಆ ದೇಶ ಸದೃಢವಾಗಿದೆ. ಇದೆಲ್ಲಾ ಕೇವಲ ನಂಬಿಕೆ ಅಷ್ಟೇ’ ಎಂದು ಲಲನ್ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಈ ಹೇಳಿಕೆ ಖಂಡಿಸಿ ಕೆಲ ಹಿಂದೂ ಸಂಘಟನೆಗಳು ಲಲನ್ ಅವರ ಪ್ರತಿಕೃತಿಯನ್ನು ದಹಿಸಿದ್ದಾರೆ.
ಪ್ರತಿಪಕ್ಷಗಳೂ ಲಲನ್ ಹೇಳಿಕೆಯನ್ನು ಖಂಡಿಸಿವೆ. ‘ಶಾಸಕರಿಗೆ ಹಿಂದೂ ದೇವತೆಗಳನ್ನು ಪೂಜಿಸುವವರ ಮತದ ಅಗತ್ಯವಿಲ್ಲ ಎಂದು ತೋರುತ್ತಿದೆ’ ಎಂದು ಆರ್ಜೆಡಿ ಶಾಸಕ ಮೃತ್ಯಂಜಯ್ ತಿವಾರಿ ವ್ಯಂಗ್ಯವಾಡಿದ್ದಾರೆ.
ಸದ್ಯ ಬಿಜೆಪಿಯಿಂದ ಯಾವ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.