ADVERTISEMENT

ಮಧ್ಯಪ್ರದೇಶ | ಬುಡಕಟ್ಟು ಯುವಕನ ಮೇಲೆ ಮೂತ್ರ ಮಾಡಿದ್ದ ಆರೋಪಿಗೆ ಬಿಜೆಪಿ ನಂಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜುಲೈ 2023, 11:47 IST
Last Updated 5 ಜುಲೈ 2023, 11:47 IST
ಬಿಜೆಪಿ ಧ್ವಜ
ಬಿಜೆಪಿ ಧ್ವಜ   

ಭೋಪಾಲ್: ಬುಡಕಟ್ಟು ಸಮುದಾಯದ ಯುವಕನ ಮೇಲೆ ಮೂತ್ರ ವಿಸರ್ಜಿಸಿ ಜೈಲು ಪಾಲಾಗಿರುವ ಆರೋಪಿಯು ಆಡಳಿತ ಪಕ್ಷ ಬಿಜೆಪಿ ಹಾಗೂ ಸಿಧಿ ಕ್ಷೇತ್ರದ ಶಾಸಕರೊಂದಿಗೆ ಒಡನಾಟ ಹೊಂದಿದ್ದ ಎಂದು ಹೇಳಲಾಗಿದೆ.

35 ವರ್ಷದ ಪ್ರವೇಶ್‌ ಶುಕ್ಲಾ ಎಂಬಾತ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಆತನನ್ನು ಮಂಗಳವಾರ ಮಧ್ಯರಾತ್ರಿ ಬಂಧಿಸಲಾಗಿದೆ.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ನಿರ್ದೇಶನದಂತೆ, ಐಪಿಸಿಯ ವಿವಿಧ ಸೆಕ್ಷನ್‌ಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಇದನ್ನೂ ಓದಿ: ಮಧ್ಯಪ್ರದೇಶ | ಬುಡಕಟ್ಟು ಯುವಕನ ಮೇಲೆ ಮೂತ್ರ ಮಾಡಿದ್ದ ಆರೋಪಿಯ ಕಟ್ಟಡ ನೆಲಸಮಕ್ಕೆ ಕ್ರಮ

ಬಂಧಿತ ಆರೋಪಿಯ ತಂದೆ ರಮಾಕಾಂತ್‌ ಅವರು, ನನ್ನ ಮಗ ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದಾನೆ. ಶಾಸಕ ಕೇದಾರ್‌ನಾಥ್‌ ಶುಕ್ಲಾ ನಿಕಟವರ್ತಿಯಾಗಿದ್ದಾನೆ. ಸುಳ್ಳು ಪ್ರಕರಣ ದಾಖಲಿಸಿ ಆತನನ್ನು ಸಿಲುಕಿಸಲು ಸಂಚು ನಡೆದಿದೆ ಎಂದು ಆರೋಪಿಸಿದ್ದಾರೆ.

ಆದರೆ, ಪ್ರವೇಶ್‌ ವರ್ತನೆಯನ್ನು ಖಂಡಿಸಿರುವ ಕೇದಾರ್‌ನಾಥ್‌ ಶುಕ್ಲಾ, ಆತನಿಗೂ (ಪ್ರವೇಶ್‌ ಶುಕ್ಲಾಗೂ) ಕೇಸರಿ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ಅಂತರ ಕಾಯ್ದುಕೊಂಡಿದ್ದಾರೆ. ಇತ್ತ ಕಾಂಗ್ರೆಸ್‌ ಪಕ್ಷವು, ಅಮಾನವೀಯ ವರ್ತನೆಯನ್ನು ಖಂಡಿಸಿ ಬೃಹತ್‌ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.