ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರು, ಶುಕ್ರವಾರದ ಚಂದ್ರಯಾನ-3 ಉಡಾವಣೆಯನ್ನು ಗೇಮ್ ಚೇಂಜರ್ ಎಂದು ಬಣ್ಣಿಸಿದ್ದಾರೆ. ಇದು ಇಡೀ ಜಗತ್ತಿಗೆ ಸ್ಫೂರ್ತಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಚಂದ್ರನ ಪರಿಶೋಧನೆಯ 3ನೇ ಕಾರ್ಯಾಚರಣೆಯು ಚಂದ್ರಯಾನ -2ರಲ್ಲಿ ಆದ ಸಮಸ್ಯೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
‘ಚಂದ್ರಯಾನ-3 ಭಾರತಕ್ಕೆ ಖಂಡಿತವಾಗಿ ಗೇಮ್ ಚೇಂಜರ್ ಆಗಲಿದೆ ಮತ್ತು ಅದು ಯಶಸ್ವಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಭಾರತ ಇಡೀ ವಿಶ್ವಕ್ಕೆ ಸ್ಪೂರ್ತಿಯಾಗಲಿದೆ. ಉಡಾವಣೆಗಾಗಿ ಕಾಯೋಣ ಮತ್ತು ಒಳ್ಳೆಯದಾಗಲಿ ಎಂದು ಪ್ರಾರ್ಥಿಸೋಣ’ಎಂದು ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಅವರು, ಚಂದ್ರಯಾನ–3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿ ಲ್ಯಾಂಡಿಂಗ್ ಮಾಡಿದರೆ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಭಾರತವಾಗಲಿದೆ. ಅಮೆರಿಕ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟಗಳು ಈ ಸಾಧನೆ ಮಾಡಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಆರ್ಥಿಕತೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವುದರ ಜೊತೆಗೆ, 600 ಶತಕೋಟಿ ಡಾಲರ್ ಉದ್ಯಮದಲ್ಲಿ ಪ್ರಸ್ತುತ ಶೇಕಡ 2ರಷ್ಟಿರುವ ಭಾರತದ ಪಾಲನ್ನು ಹೆಚ್ಚಿಸುತ್ತದೆ’ಎಂದು ಹೇಳಿದರು.
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಖಾಸಗಿ ಕಂಪನಿಗಳ ಪಾತ್ರವನ್ನು ಶ್ಲಾಘಿಸಿದ ಏರೋಸ್ಪೇಸ್ ವಿಜ್ಞಾನಿ, ಇದು ಸ್ಟಾರ್ಟಪ್ಗಳಿಗೆ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕ್ಷೇತ್ರಕ್ಕೆ ಹೆಚ್ಚಿನ ಹಣವನ್ನು ಒದಗಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.