ನವದೆಹಲಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಶನಿವಾರ ದೆಹಲಿಯ ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಗಡಿ ಉದ್ವಿಗ್ನತೆಗಳಿಗೆ ಸಂಬಂಧಿಸಿದಂತೆ ಚೀನಾಕ್ಕೆ ಹೊಸ ಎಚ್ಚರಿಕೆ ರವಾನಿಸಿದರು. ಬಲವಾದ ಮಿಲಿಟರಿಯನ್ನು ನಿರ್ಮಿಸುವ ಭರವಸೆಯನ್ನು ವರ್ಷದ ಅತ್ಯಂತ ಮಹತ್ವದ ಭಾಷಣದ ಮೂಲಕ ದೇಶಕ್ಕೆ ನೀಡಿದರು.
‘ಗಡಿಯಲ್ಲಿ ಶಾಂತಿ ಸ್ಥಾಪನೆಗಾಗಿ ಸೇನಾ ಹಿಂತೆಗೆತಕ್ಕೆ ಭಾರತ ಮತ್ತು ಚೀನಾ ನಡುವೆ ಮಾತುಕತೆಗಳು ನಡೆಸುತ್ತಿರುವ ಹೊತ್ತಿನಲ್ಲೇ, ಭಾರತದ ಸಾರ್ವಭೌಮತೆಯು ಸರ್ವೋಚ್ಛವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ನೆರೆಹೊರೆಯ ದೇಶಗಳೊಂದಿಗಿನ ಭಾರತದ ಸಂಬಂಧವು ಭದ್ರತೆ ಮತ್ತು ವಿಶ್ವಾಸದ ಮೇಲೆ ಅವಲಂಭಿತವಾಗಿರುತ್ತದೆ,’ ಎಂದು ಹೇಳಿದ್ದಾರೆ.
‘ಭಾರತದ ಸಾರ್ವಭೌಮತ್ವದ ಮೇಲೆ ಕಣ್ಣುಹಾಕಿದ ಎಲ್ಲರಿಗೂ ದೇಶದ ಸೈನ್ಯವು ಅದರದೇ ಭಾಷೆಯಲ್ಲಿ ಉತ್ತರಿಸಿದೆ’ ಎಂದು ಮೋದಿ ಅವರು ಯಾವುದೇ ರಾಷ್ಟ್ರದ ಹೆಸರು ಉಲ್ಲೇಖಿಸದೇ ಸೂಚ್ಯವಾಗಿ ತಿಳಿಸಿದರು.
ಜೂನ್ 15 ರಂದು ಹಿಮಾಲಯದ ಲಡಾಖ್ ಪ್ರದೇಶದಲ್ಲಿ ನಡೆದ ಚೀನಾದ ಸೈನಿಕರೊಂದಿಗಿನ ಗಡಿ ಘರ್ಷಣೆಯನ್ನು ಉಲ್ಲೇಖಿಸಿ ಮಾತನಾಡಿದ ಮೋದಿ ಅವರು, ‘ಭಾರತದ ಸಮಗ್ರತೆಯು ನಮಗೆ ಸರ್ವೋಚ್ಚವಾಗಿದೆ. ನಾವು ಏನು ಮಾಡಬಹುದು, ನಮ್ಮ ಸೈನಿಕರು ಏನು ಮಾಡಬಹುದು ಎಂಬುದನ್ನು ಲಡಾಕ್ನಲ್ಲಿ ಎಲ್ಲರೂ ನೋಡಿದ್ದಾರೆ,’ ಎಂದು ಅವರು ಹೇಳಿದರು.
ಚೀನಾ ಮತ್ತು ಭಾರತದ ನಡುವೆ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಸಂಭವಿಸಿದ್ದ ಘರ್ಷಣೆಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಚೀನಾದ ಕಡೆಯೂ ಸಾವು ನೋವು ಸಂಭವಿಸಿತ್ತಾದರೂ, ಆ ದೇಶ ಈ ವರೆಗೆ ಅದರ ಮಾಹಿತಿ ಬಹಿರಂಗಗೊಳಿಸಿಲ್ಲ.
‘ಭಾರತವು ತನ್ನ ಭದ್ರತೆಗೆ ಬದ್ಧವಾಗಿದೆ. ಶಾಂತಿ ಮತ್ತು ಸೌಹಾರ್ದತೆ ಎಡೆಗಿನ ಪ್ರಯತ್ನವಾಗಿ ಸೈನ್ಯವನ್ನು ಬಲಪಡಿಸುತ್ತದೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತವನ್ನು "ಸ್ವಾವಲಂಬಿಗಳನ್ನಾಗಿ" ಮಾಡುವ ಪ್ರಯತ್ನಗಳನ್ನು ಮಾಡಲಾಗುವುದು,’ ಎಂದು ಅವರು ಇದೇ ವೇಳೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.