ADVERTISEMENT

ಮೋದಿ ಸರ್ಕಾರ: 100 ದಿನಗಳಲ್ಲಿ ಆರ್ಥಿಕ ವಲಯದಲ್ಲುಂಟಾಗಲಿದೆ ಕ್ಷಿಪ್ರ ಬದಲಾವಣೆ

ರಾಯಿಟರ್ಸ್
Published 31 ಮೇ 2019, 11:45 IST
Last Updated 31 ಮೇ 2019, 11:45 IST
   

ನವದೆಹಲಿ: ನರೇಂದ್ರ ಮೋದಿ ಸರ್ಕಾರ 100 ದಿನಗಳನ್ನು ಪೂರೈಸುವ ಹೊತ್ತಿಗೆ ದೇಶದಲ್ಲಿ ದೊಡ್ಡ ಮಟ್ಟದ ಆರ್ಥಿಕ ಬದಲಾವಣೆಗಳು ನಡೆಯಲಿವೆ ಎಂದು ಚಿಂತಕರ ಚಾವಡಿ ಹೇಳಿದೆ. ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ರೀತಿಯ ಆರ್ಥಿಕ ಬದಲಾವಣೆಗಳು ನಡೆಯಲಿವೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಕಾರ್ಮಿಕರ ಕಾನೂನು, ಖಾಸಗೀಕರಣಕ್ಕಾಗಿರುವ ನಡೆ, ಹೊಸ ಉದ್ಯಮದ ಅಭಿವೃದ್ಧಿಗಾಗಿ ಲ್ಯಾಂಡ್ ಬ್ಯಾಂಕ್‌ ರೂಪೀಕರಣ ಮೊದಲಾದ ಕ್ರಾಂತಿಕಾರಿ ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ವಿದೇಶಿ ಹೂಡಿಕೆಗಾರರು ಖುಷಿ ಪಡುವ ಬದಲಾವಣೆಗಳು ಇಲ್ಲಿ ಉಂಟಾಗಲಿದೆ.ಬದಲಾವಣೆಯ ಪರ್ವವೇ ನಿಮಗಿಲ್ಲಿ ಕಾಣಬಹುದು ಎಂದಿದ್ದಾರೆ ರಾಜೀವ್ ಕುಮಾರ್.

ADVERTISEMENT

ಸಂಸತ್ತಿನಲ್ಲಿ ನಡೆಯಲಿರುವ ಮೊದಲ ಅಧಿವೇಶನದಲ್ಲಿಯೇ ಭಾರತದಲ್ಲಿರುವ ಕಾರ್ಮಿಕರ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. 44ರಷ್ಟು ಪ್ರಧಾನ ಕಾನೂನುಗಳನ್ನು ನಾಲ್ಕು ವಿಭಾಗಗಳಡಿಯಲ್ಲಿ ತರಲಾಗುವುದು.ಈ ನಾಲ್ಕು ವಿಭಾಗಗಳನ್ನುವೇತನ, ಔದ್ಯೋಗಿಕ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮತ್ತು ನಾಲ್ಕನೆಯದ್ದುಉದ್ಯೋಗದಲ್ಲಿನ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ರೀತಿ ಎಂದು ವಿಂಗಡಿಸಲಾಗಿದೆ.ಇದು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಕಂಪನಿಗೆ ಸಹಾಯ ಮಾಡಲಿದೆ. 42ರಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಅಥವಾ ಮುಚ್ಚುವ ಕಾರ್ಯಗಳು ನಡೆಯುವ ಸಾಧ್ಯತೆ ಇದೆ.

ಯೋಜನಾ ಆಯೋಗದ ಬದಲು ನಾಲ್ಕು ವರ್ಷಗಳ ಹಿಂದೆ ಮೋದಿ ಸರ್ಕಾರ ಆರಂಭಿಸಿದ ಸಂಸ್ಥೆಯಾಗಿದೆ ನೀತಿ ಆಯೋಗ.ಪ್ರಧಾನಿಯೇ ಇದರ ಅಧ್ಯಕ್ಷರಾಗಿರುತ್ತಾರೆ. ದೇಶದ ಆರ್ಥಿಕ ನೀತಿ ರಚನೆಯಲ್ಲಿ ನೀತಿ ಆಯೋಗ ಪ್ರಧಾನ ಕಾರ್ಯ ವಹಿಸುತ್ತದೆ.

ಬಿಗ್ ಬ್ಯಾಂಗ್
ಭಾರತದ ಆರ್ಥಿಕ ಅಭಿವೃದ್ಧಿ ದರ 2018ರ ಕೊನೆಯ ಮೂರು ತಿಂಗಳಲ್ಲಿ ನಿಧಾನಗತಿಯಲ್ಲಿ ಸಾಗಿ ಶೇ. 6.6 % ತಲುಪಿತ್ತು.ಬಳಕೆಯಲ್ಲಿ ಇಳಿಕೆ ಕಂಡು ಬಂದ ಕಾರಣ ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ ಇದು ಇನ್ನಷ್ಟು ಕೆಳಗಿಳಿಯುವ ಸಾಧ್ಯತೆ ಇದೆ.

ಪ್ರತಿ ತಿಂಗಳು ಸಾವಿರಾರು ಯುವಕರು ಉದ್ಯೋಗ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಹೆಚ್ಚಿನ ಉದ್ಯೋಗ ಸೃಷ್ಟಿಗಾಗಿ ಆರ್ಥಿಕ ಸ್ಥಿತಿಯಲ್ಲಿ ಕ್ಷಿಪ್ರ ಬೆಳವಣಿಗೆಯಾಗಬೇಕಿದೆ.ವಸೂಲಾಗದ ಸಾಲದಿಂದಾಗಿ ಬ್ಯಾಂಕ್‌ ವಲಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಕುಮಾರ್ ದೂರಿದ್ದಾರೆ.

ರಾಜ್ಯ ಒಡೆತನದ ಬ್ಯಾಕಿಂಗ್ ವಲಯವನ್ನು ಸುಧಾರಣೆಗೊಳಿಸಲು ಕೇಂದ್ರ ಸರ್ಕಾರ ಕಾರ್ಯ ಆರಂಭಿಸಬೇಕು. ಅದೇ ವೇಳೆ ಮೂಲಸೌಕರ್ಯಕ್ಕಾಗಿ ಹಣ ವಿನಿಯೋಗ, ಖಾಸಗೀಕರಣ ಮತ್ತು ತೆರಿಗೆ ಸಂಗ್ರಹದತ್ತ ಗಮನ ಹರಿಸಬೇಕು ಎಂದು ಕುಮಾರ್ ಸಲಹೆ ನೀಡಿದ್ದಾರೆ. ನಾವು ಬ್ಯಾಂಕ್‌ಗಳಿಂದ ಆರಂಭಿಸಬೇಕಾಗಿದೆ.ಅಲ್ಲೊಂದು ಕ್ಷಿಪ್ರ ಬದಲಾವಣೆ ಸಂಭವಿಸಲಿದೆ.100 ದಿನಗಳಲ್ಲಿ ಈ ಬದಲಾವಣೆ ಸಂಭವಿಸಲಿದೆ.ಅದಕ್ಕಾಗಿ ನಾವೆಲ್ಲರೂ ಸಿದ್ಧರಾಗಿರಬೇಕು ಎಂದಿದ್ದಾರೆ ರಾಜೀವ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.