ADVERTISEMENT

‘ಗಡಿ ಪ್ರಕ್ಷುಬ್ಧ: ಸೇನೆ ಸನ್ನದ್ಧ’

ಪಿಟಿಐ
Published 4 ಸೆಪ್ಟೆಂಬರ್ 2020, 19:55 IST
Last Updated 4 ಸೆಪ್ಟೆಂಬರ್ 2020, 19:55 IST
ಲಡಾಖ್‌ಗೆ ಶುಕ್ರವಾರ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಅವರು ಯೋಧರೊಂದಿಗೆ ಮಾತುಕತೆ ನಡೆಸಿದರು –ಪಿಟಿಐ ಚಿತ್ರ
ಲಡಾಖ್‌ಗೆ ಶುಕ್ರವಾರ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಅವರು ಯೋಧರೊಂದಿಗೆ ಮಾತುಕತೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ‘ಭಾರತ–ಚೀನಾ ವಾಸ್ತವ ಗಡಿರೇಖೆಯಲ್ಲಿ ಉದ್ವಿಗ್ನ ಸ್ಥಿತಿ ಇದೆ. ಯಾವುದೇ ಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ’ ಎಂದು ಭೂಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಹೇಳಿದರು.

ಎರಡು ದಿನಗಳ ಲಡಾಖ್‌ ಭೇಟಿಯ ಬಳಿಕ ಶುಕ್ರವಾರ ದೆಹಲಿಗೆ ಮರಳಿದ ಅವರು, ಮಾಧ್ಯಮ ಪ್ರತಿನಿಧಿ
ಗಳಿಗೆ ಅಲ್ಲಿನ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.

‘ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಪ್ರದೇಶಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಭಾರತದ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು ನಮ್ಮ ಸೇನೆ ಸನ್ನದ್ಧವಾಗಿದೆ. ದೇಶವು ನಮ್ಮ ಮೇಲೆ ಸಂಪೂರ್ಣ ವಿಶ್ವಾಸ ಇಡಬಹುದು’ ಎಂದರು.

ADVERTISEMENT

ಲಡಾಖ್‌ ಭೇಟಿಯ ವೇಳೆ ಕೆಲವು ಸೂಕ್ಷ್ಮ ಪ್ರದೇಶಗಳ ಪರಿಶೀಲನೆ ನಡೆಸಿದ ಅವರು, ಗರಿಷ್ಠ ಎಚ್ಚರಿಕೆಯಿಂದ ಇರುವಂತೆ ಯೋಧರಿಗೆ ಸೂಚನೆ ನೀಡಿದ್ದಾರೆ. ‘ನಮ್ಮ ಯೋಧರು ಹೆಚ್ಚಿನ ಆತ್ಮಸ್ಥೈರ್ಯ ಹೊಂದಿದ್ದು, ಆರೋಗ್ಯದಿಂದಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ನಮ್ಮ ದೇಶದ ರಕ್ಷಣೆಗೆ ಅವರು ಸಶಕ್ತರಾಗಿದ್ದಾರೆ’ ಎಂದು ನರವಣೆ ತಿಳಿಸಿದರು.

ಪಾಂಗಾಂಗ್‌‌ ಸರೋವರ ಪ್ರದೇಶದಲ್ಲಿ ಭಾರತದ ಭೂಪ್ರದೇಶವನ್ನು ಅತಿಕ್ರಮಣ ಮಾಡುವ ಪ್ರಯತ್ನವನ್ನು ಚೀನಾದ ಸೈನಿಕರು ಐದು ದಿನಗಳ ಹಿಂದೆ ಮಾಡಿದ್ದರು. ಇದರಿಂದಾಗಿ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಭಾರತವು ಈ ಭಾಗದ ಎತ್ತರದ ಪ್ರದೇಶಗಳಲ್ಲಿ ಪುನಃ ಪ್ರಭುತ್ವ ಸ್ಥಾಪಿಸಿದ್ದು, ತನ್ನ ಸ್ಥಿತಿಯನ್ನು ಭದ್ರಪಡಿಸಿಕೊಂಡಿದೆ. ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ರವಾನಿಸಿದೆ. ಎತ್ತರದ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿರುವುದು ಭಾರತಕ್ಕೆ ಮೇಲುಗೈ ಒದಗಿಸಿದೆ. ಎಲ್‌ಎಸಿಯ ಚೀನಾ ಭಾಗದ ಚಟುವಟಿಕೆಗಳ ಮೇಲೆ ಈ ಎತ್ತರದ ಪ್ರದೇಶದಿಂದ ನಿಗಾ ಇರಿಸುವುದು ಸಾಧ್ಯವಾಗಿದೆ ಎಂದು ಹೇಳಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.