
ರಾಷ್ಟ್ರೀಯ ರೈತರ ದಿನ (ಎಐ ಚಿತ್ರ)
ರೈತ ದೇಶದ ಬೆನ್ನೆಲುಬು. ರಾಷ್ಟ್ರದ ಅಭಿವೃದ್ಧಿಗೆ ಅವರ (ರೈತರ) ಕೊಡುಗೆ ಅಪಾರ. ಅವರ ಪರಿಶ್ರಮ ಮತ್ತು ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 23ರಂದು ‘ರಾಷ್ಟ್ರೀಯ ರೈತರ ದಿನ’ವನ್ನು ಆಚರಿಸಲಾಗುತ್ತದೆ. ಈ ಆಚರಣೆ ಯಾವಾಗ ಜಾರಿಗೆ ಬಂತು, ಈ ದಿನದ ಮಹತ್ವವೇನು ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ...
ಭಾರತದ ಐದನೇ ಪ್ರಧಾನ ಮಂತ್ರಿ ಚೌದರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವಾದ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ದೇಶದ ಬೆನ್ನೆಲುಬಾಗಿರುವ ಎಲ್ಲಾ ರೈತರಿಗೆ ಗೌರವ ಸಲ್ಲಿಸಲಾಗುತ್ತದೆ.
ಚರಣ್ ಸಿಂಗ್ ಅವರು ಅಲ್ಪಾಧಿಗೆ ದೇಶದ ಪ್ರಧಾನ ಮಂತ್ರಿಯಾಗಿದ್ದರು. 1979ರ ಜುಲೈನಲ್ಲಿ ಪ್ರಧಾನಿ ಹುದ್ದೆಗೆ ಏರಿದ್ದ ಅವರು ಜನವರಿ 1980ರ ವರೆಗೆ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರು ರೈತರ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸಿದ್ದರು.
ಅನ್ನದಾತರ ಕಲ್ಯಾಣಕ್ಕಾಗಿ ಶ್ರಮಿಸಿದ ಚರಣ ಸಿಂಗ್ ಅವರ ಗೌರವರ್ಥವಾಗಿ 2001ರಲ್ಲಿ ಭಾರತ ಸರ್ಕಾರ ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಡಿಸೆಂಬರ್ 23ರಂದು ರಾಷ್ಟೀಯ ರೈತರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಚರಣ್ ಸಿಂಗ್ ಅವರು 1902 ಡಿಸೆಂಬರ್ 23ರಂದು ಮೀರತ್ನ ನೂರ್ಪುರದಲ್ಲಿ ಜನಿಸಿದರು. ಆರ್ಥಿಕತೆಯ ಮಹತ್ವವನ್ನು ಅರಿತ ಅವರು ದೇಶದ ರೈತರ ಪರಿಸ್ಥಿತಿಯನ್ನು ಸುಧಾರಿಸಲು ಹಲವು ಪೂರಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಕೃಷಿ ಅಭಿವೃದ್ಧಿಗಾಗಿ ಮತ್ತು ರೈತ ಸಮುದಾಯವನ್ನು ಬೆಂಬಲಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವುಗಳಲ್ಲಿ ಮುಖ್ಯವಾಗಿ
ಭೂ ಸುಧಾರಣೆ
ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸುವುದು
ರೈತರ ಹಕ್ಕುಗಳನ್ನು ರಕ್ಷಿಸುವುದು ಸೇರಿವೆ.
ದೇಶದ ರೈತರ ಪರಿಶ್ರಮ ಮತ್ತು ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಗುತ್ತದೆ. ಜತೆಗೆ ಪ್ರಕೃತಿ ವಿಕೋಪಗಳು, ಬೆಲೆ ಏರಿಳಿತದಂತಹ ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.