ನವದೆಹಲಿ(ಪಿಟಿಐ): 2011ರಲ್ಲಿ ನಡೆದ 34ನೇ ರಾಷ್ಟ್ರೀಯ ಕ್ರೀಡಾಕೂಟದ ಸಾಧನಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಜಾರ್ಖಂಡ್ನ ಮಾಜಿ ಕ್ರೀಡಾ ಸಚಿವ ಬಂಧು ತಿರ್ಕಿ ಅವರ ನಿವಾಸ ಸೇರಿದಂತೆ 16 ಸ್ಥಳಗಳ ಮೇಲೆ ಗುರುವಾರ ಸಿಬಿಐ ಏಕಕಾಲದಲ್ಲಿ ದಾಳಿ ಮಾಡಿದೆ.
ಅಲ್ಲದೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರ ಕ್ರೀಡೆಗಳ ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಖ್ಯಾತ ವಕೀಲ ಆರ್.ಕೆ.ಆನಂದ್, ಆಗಿನ ರಾಜ್ಯ ಕ್ರೀಡಾ ನಿರ್ದೇಶಕ ಪಿ.ಸಿ.ಮಿಶ್ರಾ, ರಾಷ್ಟ್ರೀಯ ಕ್ರೀಡೆಗಳ ಸಂಘಟನಾ ಕಾರ್ಯದರ್ಶಿ ಮಧುಕಾಂತ್ ಪಾಠಕ್, ಸಂಘಟನಾ ಕಾರ್ಯದರ್ಶಿ ಎಚ್.ಎಂ.ಹಷ್ಮಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೂ ದಾಳಿ ನಡೆಸಲಾಗಿದೆ.
ಈ ಪ್ರಕರಣವನ್ನು ಮೊದಲಿಗೆ ರಾಜ್ಯ ಭ್ರಷ್ಟಾಚಾರ ನಿಯಂತ್ರಣ ತಂಡ ತನಿಖೆ ನಡೆಸುತ್ತಿತ್ತು. ಬಳಿಕ ಈ ಪ್ರಕರಣವನ್ನುಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಜಾರ್ಖಂಡ್ ಹೈಕೋರ್ಟ್ ಸಿಬಿಐಗೆ ಹಸ್ತಾಂತರಿಸಿತ್ತು. ತಿರ್ಕಿ ಅವರು ಜಾರ್ಖಂಡ್ ವಿಕಾಸ್ ಮೋರ್ಚಾ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಅವರ ಆತ್ಮೀಯರಾಗಿದ್ದು, ಈ ಪಕ್ಷ ಬಿಜೆಪಿ ಜೊತೆ ವಿಲೀನವಾಗುವುದಕ್ಕೆ ತಿರ್ಕಿ ವಿರೋಧಿಸಿದ್ದರು. ಅಲ್ಲದೆ 2019ರ ವಿಧಾನಸಭೆ ಚುನಾವಣೆ ಬಳಿಕ ತಿರ್ಕಿ ಅವರು ಕಾಂಗ್ರೆಸ್ ಸೇರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.