ADVERTISEMENT

ಹಿಂದಿಯಲ್ಲಿ ಪ್ರಶ್ನಿಸಬೇಡಿ, ನಾನು ತಮಿಳಿಗ: ಸುಬ್ರಮಣಿಯನ್‌ ಸ್ವಾಮಿ

ಹಿಂದಿಯಲ್ಲಿ ಪ್ರಶ್ನೆ ಕೇಳಿದ ವಕೀಲರಿಗೆ ಪ್ರತಿಕ್ರಿಯೆ

ಪಿಟಿಐ
Published 30 ಆಗಸ್ಟ್ 2019, 19:45 IST
Last Updated 30 ಆಗಸ್ಟ್ 2019, 19:45 IST
ಸುಬ್ರಮಣಿಯನ್‌ ಸ್ವಾಮಿ 
ಸುಬ್ರಮಣಿಯನ್‌ ಸ್ವಾಮಿ    

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ದೂರುದಾರ, ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಹಾಗೂ ಸೋನಿಯಾ ಗಾಂಧಿ ಪರ ವಕೀಲ ಆರ್.ಎಸ್.ಚೀಮಾ ನಡುವೆ ವಾಗ್ವಾದ ನಡೆದಿದೆ.

ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ಸಮ್ಮುಖದಲ್ಲಿ ನಡೆದ ವಿಚಾರಣೆ ವೇಳೆ,ಚೀಮಾ ಅವರು ಹಿಂದಿಯಲ್ಲಿ ಪ್ರಶ್ನಿಸಿದನ್ನು ವಿರೋಧಿಸಿದ ಸ್ವಾಮಿ, ‘ನಾನು ತಮಿಳಿಗ’ ಎಂದಿದ್ದಾರೆ.

‘ಇಂಡಿಯನ್‌ ಎಕ್ಸ್‌ಪ್ರೆಸ್‌ ಕಟ್ಟಡ ನಿರ್ಮಾಣವಾಗಿರುವ ರಸ್ತೆಯಲ್ಲಿ...’ ಎಂದು ಹಿಂದಿಯಲ್ಲಿ ಸ್ವಾಮಿ ಅವರನ್ನು ಪ್ರಶ್ನಿಸಲು ಚೀಮಾ ಮುಂದಾದರು. ಇದನ್ನು ವಿರೋಧಿಸಿದ ಸ್ವಾಮಿ, ‘ದಯವಿಟ್ಟು ಇಂಗ್ಲೀಷ್‌ನಲ್ಲಿ ಮಾತನಾಡಿ. ನಾನು ತಮಿಳಿಗ ಎಂದು ನೆನಪಿಸಿಕೊಳ್ಳಿ. ಇಂಗ್ಲಿಷ್‌ ನ್ಯಾಯಾಲಯದ ಭಾಷೆ’ ಎಂದರು.

ADVERTISEMENT

ಈ ಸಂದರ್ಭದಲ್ಲಿ ಪ್ರಾರಂಭವಾದ ವಾಗ್ವಾದ ತಾರಕಕ್ಕೇರುವ ಮುನ್ನವೇ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ‘ಇಂಗ್ಲಿಷ್‌ ಹಾಗೂ ಹಿಂದಿ ಎರಡೂ ನ್ಯಾಯಾಲಯದ ಭಾಷೆ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮಿ, ‘ನಾನು ಸಂಸ್ಕೃತ ಮಿಶ್ರಿತ ಹಿಂದಿಯನ್ನಷ್ಟೇ ಅರ್ಥಮಾಡಿಕೊಳ್ಳಬಲ್ಲೆ. ಉರ್ದು ಮಿಶ್ರಿತ ಹಿಂದಿ ಅರ್ಥವಾಗುವುದಿಲ್ಲ’ ಎಂದರು. ನಂತರದಲ್ಲಿ ಚೀಮಾ ಹಿಂದಿ ಬಳಸಲಿಲ್ಲ.

ಕಾಂಗ್ರೆಸ್‌ ಕಾರ್ಯಕರ್ತರೇ ಸಂತ್ರಸ್ತರು

‘ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳೇ ವಂಚಿಸಿದವರು. ಕಾಂಗ್ರೆಸ್‌ ಕಾರ್ಯಕರ್ತರು ಈ ವಂಚನೆಯ ಸಂತ್ರಸ್ತರು. 2016 ಏಪ್ರಿಲ್‌ 7ರಂದು ಬೇರೊಂದು ಸ್ಥಳದಿಂದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪುನರಾರಂಭವಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ 2014 ಜೂನ್‌ 26ರಂದು ಸಮನ್ಸ್‌ ನೀಡಲಾಗಿತ್ತು. ಹೆರಾಲ್ಡ್‌ ಹೌಸ್‌ ವಶಕ್ಕೆ ಪಡೆದುಕೊಳ್ಳಲು ಡಿಡಿಎ ಮುಂದಾದಾಗ ಮುದ್ರಣ ಪುನರಾರಂಭವಾಯಿತು. ಪತ್ರಿಕೆ ಸ್ಥಗಿತವಾದಾಗ ಎಲ್ಲ ಸಿಬ್ಬಂದಿಗೂ ಸ್ವಯಂ ನಿವೃತ್ತಿ ಪಡೆಯುವಂತೆ ಸೂಚಿಸಲಾಗಿತ್ತು’ ಎಂದು ಸುಬ್ರಮಣಿಯನ್‌ ಸ್ವಾಮಿ ವಿಚಾರಣೆ ವೇಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.