ಹುಲಿ
ವಯನಾಡ್: ಕಳೆದ ವಾರ ಕೇರಳದ ವಯನಾಡ್ನಲ್ಲಿನ ಕಾಫಿ ತೋಟವೊಂದರ ಕಾರ್ಮಿಕ ಮಹಿಳೆ ರಾಧಾ ಎನ್ನುವರ ಮೇಲೆ ದಾಳಿ ಮಾಡಿ ಕೊಂದಿದ್ದ ಹುಲಿಯ ಕಳೇಬರ ನಿನ್ನೆ ಬೆಳಗಿನ ಜಾವ ವಯನಾಡಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಹುಲಿಯ ಕಳೇಬರ ಪತ್ತೆಯಾಗಿದ್ದರ ಬಗ್ಗೆ ಕೇರಳ ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ವಿಸ್ತೃತ ವರದಿ ಕೇಳಿದೆ.
ಮತ್ತೊಂದು ಹುಲಿಯ ಜೊತೆ ಕಾದಾಟದಲ್ಲಿ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ನರಭಕ್ಷಕ ಹುಲಿ ಮೃತಪಟ್ಟಿದೆ ಎಂದು ಈಗಾಗಲೇ ಪ್ರಾಥಮಿಕ ತನಿಖೆಯಲ್ಲಿ ಕೇರಳ ಅರಣ್ಯ ಇಲಾಖೆ ಕಂಡುಕೊಂಡಿದೆ ಎಂದು ತಿಳಿದು ಬಂದಿತ್ತು.
ಆದರೆ, ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಎನ್ಟಿಸಿಎ ಒಂದು ವಾರದಲ್ಲಿ ವಿಸ್ತೃತ ವರದಿ ನೀಡುವಂತೆ ಕೇರಳ ಅರಣ್ಯ ಇಲಾಖೆಗೆ ತಾಕೀತು ಮಾಡಿದೆ. ಈ ಕುರಿತು ದಿ ಹಿಂದೂ ನ್ಯೂಸ್ ವೆಬ್ಸೈಟ್ ವರದಿ ಮಾಡಿದೆ.
ಮೃತ ಹುಲಿಯ ಮಾಹಿತಿಯು ಕೇರಳ ಅರಣ್ಯ ಅಧಿಕಾರಿಗಳ ಬಳಿ ಇರಲಿಲ್ಲ. ಆದ್ದರಿಂದ, ಇದು ಕೇರಳ ಭಾಗದ ಹುಲಿಯಾಗಿರಲಿಲ್ಲ. ಕರ್ನಾಟಕ ಅರಣ್ಯ ಪ್ರದೇಶಗಳಿಂದ ಇಲ್ಲಿಗೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಹುಲಿಯ ಸಾವಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.