ADVERTISEMENT

ಮುಂಬೈ ಬೆಂಕಿ ಅವಘಡ: 3 ಮಕ್ಕಳನ್ನು ರಕ್ಷಿಸಿದ ವ್ಯಕ್ತಿ ಸುಟ್ಟಗಾಯಗಳಿಂದಾಗಿ ಸಾವು

ಪಿಟಿಐ
Published 26 ಜೂನ್ 2022, 14:22 IST
Last Updated 26 ಜೂನ್ 2022, 14:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ನವಿಮುಂಬೈನ ಪನ್ವೆಲ್‌ನ ಬಂಗ್ಲೆಯೊಂದರಲ್ಲಿ ಭಾನುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ, ತನ್ನ ಮೂವರು ಮಕ್ಕಳನ್ನು ರಕ್ಷಿಸಿದ ವ್ಯಕ್ತಿ, ಸುಟ್ಟಗಾಯಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೀವ್‌ ಠಾಕೂರ್‌ (38) ಮೃತ ದುರ್ದೈವಿ. ‘ಅವರು ನಟರಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಶಾರ್ಟ್‌ ಸರ್ಕೀಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಖಾಂಡೇಶ್ವರ ಠಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಆಕುರ್ಲಿ ಗ್ರಾಮದಲ್ಲಿ ರಾಜೀವ್‌ ಅವರ ಎರಡು ಮಹಡಿ ಕಟ್ಟಡದಲ್ಲಿ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ, ಅವರು ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದ್ದಾರೆ. ಲ್ಯಾಪ್‌ಟಾಪ್‌, ದಾಖಲೆಪತ್ರಗಳನ್ನು ತರಲು ಮೊದಲ ಮಹಡಿಗೆ ಹೋದಾಗ, ಬೆಂಕಿಯಲ್ಲಿ ಸಿಲುಕಿದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು’ ಎಂದು ತಿಳಿಸಿದ್ದಾರೆ.

ಮೂರು ಅಗ್ನಿಶಾಮಕ ವಾಹನಗಳು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದವು.

ಘಟನೆ ನಡೆದಾಗ ರಾಜೀವ್‌ ಅವರ ಪತ್ನಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.