ನವದೆಹಲಿ: ಹೊಸ ಶಿಕ್ಷಣ ನೀತಿಗೆ (ಎಇಪಿ) ಅನುಗುಣವಾಗಿ ರೂಪಿಸಲಾಗಿರುವ ಪಠ್ಯಪುಸ್ತಕಗಳ ಕುರಿತು ಬಂದಿರುವ ಪ್ರತಿಕ್ರಿಯೆಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ನೇಮಿಸಿದೆ.
ಯಾವ ಪಠ್ಯಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳ ಕುರಿತು ಸಮಿತಿ ರಚಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ‘ಕೆಲವು ಪಠ್ಯಪುಸ್ತಕದಲ್ಲಿ ಇರುವ ಪಠ್ಯಗಳ ಕುರಿತು ಪ್ರತಿಕ್ರಿಯೆಗಳು ಬಂದಿವೆ. ಇದಕ್ಕಾಗಿ ಹಿರಿಯ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಶೀಘ್ರವೇ ವರದಿ ನೀಡಲಿದೆ’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
‘ನಾವು ಸಿದ್ಧಪಡಿಸಿದ ಪಠ್ಯಗಳ ಬಗ್ಗೆ ನಿರಂತರವಾಗಿ ಪ್ರತಿಕ್ರಿಯೆಗಳನ್ನು ಕೇಳುತ್ತೇವೆ. ಬಳಿಕ ತಜ್ಞರ ಸಮಿತಿ ರಚಿಸುತ್ತೇವೆ. ನಮ್ಮ ಕೆಲವು ಪಠ್ಯಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ಬಂದಿವೆ. ಅಂತೆಯೇ ಈಗಲೂ ತಜ್ಞರ ಸಮಿತಿ ರಚಿಸಿದ್ದೇವೆ’ ಎಂದು ಹೇಳಿದರು.
‘ಎಕ್ಸ್ಪ್ಲೋರಿಂಗ್ ಸೊಸೈಟಿ: ಇಂಡಿಯಾ ಆ್ಯಂಡ್ ಬಿಯಾಂಡ್’ ಹೆಸರಿನ ಪಠ್ಯಪುಸ್ತಕವನ್ನು ಇತ್ತೀಚೆಗಷ್ಟೇ 8ನೇ ತರಗತಿಗಾಗಿ ಎನ್ಸಿಇಆರ್ಟಿ ಹೊಸದಾಗಿ ಸಿದ್ಧಪಡಿಸಿತ್ತು. ಈ ಪಠ್ಯಪುಸ್ತಕವು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಅಕ್ಬರ್ ಆಡಳಿತವು ‘ಕ್ರೌರ್ಯ’ ಮತ್ತು ‘ಸಹಿಷ್ಣುತೆ’ಯ ಮಿಶ್ರಣವಾಗಿತ್ತು. ಬಾಬರ್ ಒಬ್ಬ ‘ನಿರ್ದಯಿ ರಾಜ’ನಾಗಿದ್ದ. ಮುಸ್ಲಿಮೇತರರ ಮೇಲೆ ತೆರಿಗೆಯನ್ನು ಮತ್ತೊಮ್ಮೆ ಹೇರಿದಂಥ ಔರಂಗಜೇಬ್ ಸೇನಾ ಆಡಳಿತಗಾರನಾಗಿದ್ದ ಎಂಬೆಲ್ಲಾ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.