
ನವದೆಹಲಿ: ‘ಭ್ರಷ್ಟಾಚಾರ, ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಾಗೂ ನ್ಯಾಯಾಧೀಶರ ಅಲಭ್ಯತೆ ಇದು ಪ್ರಸಕ್ತ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಪ್ರಮುಖ ಸವಾಲುಗಳು’ ಹೀಗೆಂದು ಎನ್ಸಿಇಆರ್ಟಿ ರೂಪಿಸರುವ 8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಹೇಳಲಾಗಿದೆ.
ಈ ಹಿಂದಿನ ಪಠ್ಯದಲ್ಲಿ ನ್ಯಾಯಾಲಯಗಳ ಪಾತ್ರ, ರಚನೆಯ ಬಗ್ಗೆ ಗಮನಹರಿಸಲಾಗಿತ್ತು. ಆದರೆ ಈಗ ಪರಿಷ್ಕೃತ ಪಠ್ಯದಲ್ಲಿ ‘ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಅಧ್ಯಯದ ಮೂಲಕ ನ್ಯಾಯಾಂಗ ವ್ಯವಸ್ಥೆಯ ವಿವಿಧ ಸ್ತರ ಹಾಗೂ ನ್ಯಾಯ ಖಾತರಿಯ ವಿಚಾರ, ಸವಾಲುಗಳ ಬಗ್ಗೆ ಉಲ್ಲೇಖಿಸಲಾಗಿದೆ.
‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಪ್ರತ್ಯೇಕ ವಿಭಾಗದಲ್ಲಿ ‘ನ್ಯಾಯಾಲಯದ ಒಳಗೆ ಮಾತ್ರವಲ್ಲದೆ ಹೊರಗೂ ತಮ್ಮ ನಡವಳಿಗಳನ್ನು ನಿಯಂತ್ರಿಸುವ ನೀತಿ ಸಂಹಿತೆಗೆ ನ್ಯಾಯಾಧೀಶರು ಬದ್ಧರಾಗಿರುತ್ತಾರೆ’ ಎಂಬ ಅಂಶವನ್ನು ಹೇಳಲಾಗಿದೆ.
ನ್ಯಾಯಾಂಗದ ವಿವಿಧ ಹಂತಗಳಲ್ಲಿ ಜನರು ಭ್ರಷ್ಟಾಚಾರವನ್ನು ಎದುರಿಸಿದ್ದಾರೆ. ಇದು ಬಡವರಿಗೆ ನ್ಯಾಯ ಖಾತರಿಪಡಿಸಿಕೊಳ್ಳಲು ಅಡಚಣೆ ಉಂಟುಮಾಡಬಹುದಾಗಿದೆ. ಹೀಗಾಗಿ ಅವುಗಳನ್ನು ತಡೆಗಟ್ಟಿ ಜನರಲ್ಲಿ ವಿಶ್ವಾಸವನ್ನು ವೃದ್ಧಿಸಲು, ನ್ಯಾಯಾಂಗದಲ್ಲಿ ಪಾದರ್ಶಕತೆ ತರಲು ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಉಲ್ಲೇಖಿಸಲಾಗಿದೆ.
ಜತೆಗೆ ಸುಪ್ರೀಂ ಕೋರ್ಟ್ನಲ್ಲಿ 81 ಸಾವಿರ ಪ್ರಕರಣಗಳು ಬಾಕಿ ಉಳಿದಿದ್ದು, ಹೈಕೋರ್ಟ್ಗಳಲ್ಲಿ 62.40 ಲಕ್ಷ ಪ್ರಕರಣಗಳು, ಜಿಲ್ಲಾ ಮತ್ತು ಕೆಳ ಹಂತದ ನ್ಯಾಯಾಲಯಗಳಲ್ಲಿ 4.70 ಕೋಟಿ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ ಎಂಬ ಅಂಶವನ್ನೂ ಪಠ್ಯ ಒಳಗೊಂಡಿದೆ.
ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು 2025ರ ಜುಲೈನಲ್ಲಿ ಪಾದರ್ಶಕತೆ ಮತ್ತು ಹೊಣೆಗಾರಿಕೆ ಕುರಿತಂತೆ ಹೇಳಿದ್ದ ಹೇಳಿಕೆಯನ್ನೂ ಪಠ್ಯ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.