ಪುಣೆ: ‘ರಾಷ್ಟ್ರೀಯ ಮತ್ತು ಸಾಮಾಜಿಕ ಏಕತೆ ವಿಷಯ ಕುರಿತು ಯುವ ಪೀಳಿಗೆಗೆ ವಿವರಿಸುವಾಗ ದೇಶ ವಿಭಜನೆ ವೇಳೆ ಭುಗಿಲೆದ್ದಿದ್ದ ಸಂಘರ್ಷದ ವಿಚಾರವನ್ನು ತಿಳಿಸುವುದು ಸರಿಯಲ್ಲ’ ಎಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಭಾನುವಾರ ಹೇಳಿದರು.
ದೇಶ ವಿಭಜನೆ ಸಂದರ್ಭದಲ್ಲಿನ ಸಂಘರ್ಷ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ತಿಳಿಸುವಂತೆ ಸಿಬಿಎಸ್ಇ ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದನ್ನು ಪ್ರಸ್ತಾಪಿಸಿ ಅವರು ತಮ್ಮ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಶಾಲೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿರಿಯ ಕಾಂಗ್ರೆಸ್ ನಾಯಕ ಸುಶೀಲ್ಕುಮಾರ್ ಶಿಂದೆ, ಬಿಜೆಪಿ ಮುಖಂಡ ಹಾಗೂ ಸಚಿವ ಚಂದ್ರಕಾಂತ ಪಾಟೀಲ್ ಅವರೂ ವೇದಿಕೆಯಲ್ಲಿದ್ದರು.
‘ದೇಶ ವಿಭಜನೆಯ ಇತಿಹಾಸ ಎಂದರೆ ರಕ್ತಪಾತದ ನಡುವೆ ದೇಶವನ್ನು ಇಬ್ಭಾಗ ಮಾಡಿದ ಇತಿಹಾಸವೇ ಆಗಿದೆ. ಸಾವಿರಾರು ಜನರು ನೆಲೆ ಕಳೆದುಕೊಂಡರು. ಸಿಂಧಿ ಸಮುದಾಯದವರು ಭಾರತಕ್ಕೆ ವಲಸೆ ಬಂದರು. ಪಂಜಾಬ್ನಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಎಷ್ಟೋ ಜನ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು’ ಎಂದು ಪವಾರ್ ವಿವರಿಸಿದರು.
‘ಈ ಸುತ್ತೋಲೆ ವಿಷಯದಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ. ಆದರೂ ಅದು ತನ್ನ ನಿಲುವು ತಿಳಿಸಬೇಕು. ಇಂತಹ ಯಾವುದೇ ವಿಷಯವು ಸಮಾಜದಲ್ಲಿ ಸಂಘರ್ಷ ಸೃಷ್ಟಿಸುವುದಿಲ್ಲ ಎಂಬುದನ್ನೂ ಸರ್ಕಾರ ಖಾತ್ರಿಪಡಿಸಬೇಕು’ ಎಂದರು.
ದೇಶ ವಿಭಜನೆಯಿಂದಾಗಿ ಸ್ಥಳಾಂತರಗೊಂಡವರ ಹಾಗೂ ಪ್ರಾಣ ಕಳೆದುಕೊಂಡವರ ಗೌರವಾರ್ಥ ಆಗಸ್ಟ್ 14 ಅನ್ನು ‘ವಿಭಜನೆಯ ಕರಾಳ ನೆನಪಿನ ದಿನ’ವೆಂದು 2021ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.