ಮುಂಬೈ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಒಟ್ಟು ಆಸ್ತಿ ಮೌಲ್ಯ ಕಳೆದ ಆರು ವರ್ಷಗಳ ಅವಧಿಯಲ್ಲಿ ₹ 60 ಲಕ್ಷ ಹೆಚ್ಚಾಗಿದೆ. ಚುನಾವಣಾ ಪ್ರಮಾಣಪತ್ರದ ಅನುಸಾರ ಅವರ ಒಟ್ಟು ಆಸ್ತಿ ಮೌಲ್ಯ ₹ 32.73 ಕೋಟಿ.
ಮಾರ್ಚ್ 26ರಂದು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಆಸ್ತಿ ವಿವರ ಕುರಿತ ಪ್ರಮಾಣಪತ್ರದಲ್ಲಿ ಅವರು, ₹ 1 ಕೋಟಿ ಹೊಣೆಗಾರಿಕೆಯಿದ್ದು, ಸೋದರ ಸಂಬಂಧಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಮತ್ತು ಸಂಬಂಧಿ ಪಾರ್ಥ ಪವಾರ್ ಅವರಿಂದ ಶೇರು ವರ್ಗಾವಣೆಗಾಗಿ ಮುಂಗಡವಾಗಿ ಠೇವಣಿ ಸ್ವೀಕರಿಸಲಾಗಿದೆ ಎಂದು ವಿವರಿಸಿದ್ದಾರೆ.
2104ರ ರಾಜ್ಯಸಭೆ ಚುನಾವಣೆ ವೇಳೆ ಅವರು ಒಟ್ಟು ₹ 32.13 ಕೋಟಿ ಆಸ್ತಿ ಘೊಷಿಸಿಕೊಂಡಿದ್ದರು. ಆಗ ಯಾವುದೇ ಹೊಣೆಗಾರಿಕೆಯನ್ನು ಉಲ್ಲೇಖಿಸಿರಲಿಲ್ಲ.
ವೇಣುಗೋಪಾಲ್ಗೆ ರಾಜ್ಯಸಭೆ ಟಿಕೆಟ್
ನವದೆಹಲಿ (ಪಿಟಿಐ): ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ರಾಜಸ್ಥಾನ ವಿಧಾನಸಭೆಯಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಇನ್ನೊಬ್ಬ ಪ್ರಧಾನ ಕಾರ್ಯದರ್ಶಿ ರಾಜೀವ್ ಸತಾವ್ ಮಹಾರಾಷ್ಟ್ರದಿಂದ ಮತ್ತು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಕೆ.ಟಿ.ಎಸ್. ತುಳಸಿ ಹಾಗೂ ಫೂಲೊ ದೇವಿ ನತಾಮ್ ಅವರಿಗೆ ಛತ್ತೀಸಗಡನಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.