ಕಠ್ಮಂಡು: ಭಾರತದ ಮೂರು ಪ್ರಮುಖ ಆಯಕಟ್ಟಿನ ಪ್ರದೇಶಗಳನ್ನು ಒಳಗೊಂಡಿರುವ ಪರಿಷ್ಕೃತ ರಾಜಕೀಯ ನಕ್ಷೆಯನ್ನು ಸೇರಿಸಿದ್ದ ಶಾಲಾಪಠ್ಯ ಪುಸ್ತಕದ ವಿತರಣೆಯನ್ನು ತಕ್ಷಣವೇ ನಿಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿರುವ ‘ನೇಪಾಳದ ಟೆರ್ರಿಟರಿ ಅಂಡ್ ರೀಡಿಂಗ್ ಮೆಟೀರಿಯಲ್ಸ್ ಫಾರ್ ಬಾರ್ಡರ್ ಇಶ್ಯೂಸ್‘ ಪಠ್ಯದಲ್ಲಿಇದನ್ನು ಸೇರಿಸಲಾಗಿತ್ತು. ಪುಸ್ತಕ ವಿತರಣೆ ಮತ್ತು ಮುದ್ರಣವನ್ನು ನಿಲ್ಲಿಸುವಂತೆಶಿಕ್ಷಣ ಸಚಿವಾಲಯಕ್ಕೆ ಸೂಚಿಸಲಾಗಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
‘ಶಿಕ್ಷಣ ಸಚಿವಾಲಯಕ್ಕೆ ನೇಪಾಳದ ಭೌಗೋಳಿಕ ಪ್ರದೇಶವನ್ನು ಬದಲಾಯಿಸುವ ಅಧಿಕಾರವಿಲ್ಲ ಮತ್ತು ಪುಸ್ತಕದಲ್ಲಿ ಹಲವು ದೋಷಗಳಿವೆ. ದೋಷ ಸರಿಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಭೂ ಸುಧಾರಣೆ ಮತ್ತು ಸಹಕಾರಿ ಸಚಿವಾಲಯದ ವಕ್ತಾರ ಜನಕ್ ರಾಜ್ ಜೋಶಿ ತಿಳಿಸಿದ್ದಾರೆ.
ನೇಪಾಳ ಭೂಪ್ರದೇಶ ಮತ್ತು ಭಾರತದೊಂದಿಗೆ ಗಡಿ ವಿವಾದದ ಕುರಿತ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿರುವ110 ಪುಟಗಳ ಪುಸ್ತಕವನ್ನು ನೇಪಾಳ ಶಿಕ್ಷಣ ಸಚಿವರು ಸೆಪ್ಟೆಂಬರ್ 15 ರಂದು ಬಿಡುಗಡೆ ಮಾಡಿದ್ದರು.
ಭಾರತಕ್ಕೆ ಸೇರಿದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾ ಧುರಾ ಪ್ರದೇಶಗಳನ್ನೊಳಗೊಂಡು ತಯಾರಿಸಿದ ಪರಿಷ್ಕೃತ ನಕ್ಷೆಗೆ ನೇಪಾಳದ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ ಈ ಪರಿಷ್ಕೃತ ನಕ್ಷೆಯನ್ನು ಭಾರತ ತಿರಸ್ಕರಿಸಿತ್ತು. ‘ಇದೊಂದು, ಕೃತಕ ವಿಸ್ತರಣೆ. ಸಮ್ಮತವಲ್ಲದ್ದು’ ಎಂದು ಆಕ್ಷೇಪವನ್ನು ಭಾರತ ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.