ಕಾನ್ಪುರ: 'ಸ್ವಾವಲಂಬಿ ಭಾರತ'ಪರಿಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿ'ಯನ್ನು ಜಾರಿಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಹೇಳಿದ್ದಾರೆ.
ಕಾನ್ಪುರ ಐಐಟಿಯ 54ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿರುವ ಯೋಗಿ, 'ಸ್ವಾವಲಂಬಿ ಭಾರತ ಪರಿಕಲ್ಪನೆಯ ಸಾಕಾರಕ್ಕಾಗಿ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020ರಲ್ಲಿ ಅನುಷ್ಠಾನಗೊಳಿಸಲಾಗಿದೆ. ದೂರದೃಷ್ಟಿ ಮತ್ತು ರಾಜ್ಯದ ಯುವಕರಿಗೆ ಹೊಸ ದಾರಿ ತೋರುವ ಕಾನ್ಪುರ ಐಐಟಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ –ಐಐಟಿ, ಲಖನೌ ಐಐಟಿಯನ್ನು ಹೊಂದಿರುವುದು ನಮ್ಮ ಸುಯೋಗ' ಎಂದು ಹೇಳಿದ್ದಾರೆ.
'ರಾಜ್ಯ ಸರ್ಕಾರದೊಂದಿಗೆ ಪರಸ್ಪರ ಸಹಕಾರಕ್ಕೆ ಸಂಬಂಧಿಸಿದ ಸಾಕಷ್ಟು ನಿದರ್ಶನಗಳನ್ನು ಐಐಟಿ ಕಾನ್ಪುರ ನೀಡಿದೆ. ರಕ್ಷಣಾ ಉತ್ಪಾದನೆ ವಿಚಾರದಲ್ಲಿಯೂ ತಾಂತ್ರಿಕ ಸಹಭಾಗಿತ್ವದ ಪಾತ್ರವನ್ನು ನಿಭಾಯಿಸುತ್ತಿದೆ' ಎಂದೂ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.21ನೇ ಶತಮಾನದಲ್ಲಿ ಭಾರತ ಹೇಗಿರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಹೊಂದಿರುವ ದೃಷ್ಟಿಕೋನದ ಬಗ್ಗೆಯೂಮೆಚ್ಚುಗೆ ವ್ಯಕ್ತಪಡಿಸಿರುವ ಯೋಗಿ, ಮೋದಿ ಅವರುಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ದೇಶೀಯ ತಂತ್ರಜ್ಞಾನಸಂಸ್ಥೆ(ಐಐಟಿ)ಯನ್ನಾಗಿ ಬದಲಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಮುಂದುವರಿದು, ಸರ್ಕಾರವು ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕಾಗಿ ಹೊಸದಾಗಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಅನುಮೋದನೆ ನೀಡಿರುವುದಾಗಿಯೂ ಇದೇ ವೇಳೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.