ಜೈಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ತಿರುಚಿದ್ದ ವಿಡಿಯೊ ಹಂಚಿಕೊಂಡಿರುವ ಆರೋಪದಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ರಾಜ್ಯವರ್ಧನ ಸಿಂಗ್ ರಾಥೋಡ್, ಟಿ.ವಿ ವಾಹಿನಿಯ ನಿರೂಪಕ ಹಾಗೂ ಇತರರ ವಿರುದ್ಧ ಶನಿವಾರ ಇಲ್ಲಿ ಎಫ್ಐಆರ್ ದಾಖಲಾಗಿದೆ.
ಸ್ಥಳೀಯ ಕಾಂಗ್ರೆಸ್ ಮುಖಂಡ ರಾಮ್ ಸಿಂಗ್ ಅವರು ಬನಿಪಾರ್ಕ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಝೀ ನ್ಯೂಸ್ ವಾಹಿನಿಯ ನಿರೂಪಕ ರೋಹಿತ್ ರಂಜನ್ ಅವರು, ಎಸ್ಎಫ್ಐ ಕಾರ್ಯಕರ್ತರ ಕುರಿತುರಾಹುಲ್ ಗಾಂಧಿ ಮಾತನಾಡಿರುವ ವಿಡಿಯೊವನ್ನು ವಾಹಿನಿಯಲ್ಲಿ ಪ್ರಸಾರ ಮಾಡಿ ಅದನ್ನು ಉದಯಪುರದಲ್ಲಿ ನಡೆದ ಟೇಲರ್ ಹತ್ಯೆ ಪ್ರಕರಣಕ್ಕೆ ಅನ್ವಯಿಸಿ ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವಿಚಾರವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಟಿ.ವಿ. ವಾಹಿನಿಯನ್ನು ಟೀಕಿಸಿದ ಬೆನ್ನಲ್ಲೇ ಎಫ್ಐಆರ್ ದಾಖಲಾಗಿದೆ.
ರಾಜ್ಯವರ್ಧನ ರಾಥೋಡ್, ಮೇಜರ್ ಸುರೇಂದ್ರ ಪೂನಿಯಾ (ನಿವೃತ್ತ) ಮತ್ತು ಕಮಲೇಶ್ ಸೈನಿ ಜೊತೆ ಸೇರಿ ಮಾಧ್ಯಮ ಸಂಸ್ಥೆಯು ಪಿತೂರಿ ನಡೆಸಿದೆ. ಇವರೆಲ್ಲರೂ ಟ್ವಿಟರ್ನಲ್ಲಿ ಈ ತಿರುಚಿದ್ದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದೂ ದೂರಿನಲ್ಲಿ ಹೇಳಲಾಗಿದೆ.
‘ರಾಹುಲ್ ಗಾಂಧಿ ಅವರು ವಯನಾಡಿನ ಯುವಕರನ್ನು ಉದ್ದೇಶಿಸಿ ಮಾಡತನಾಡಿದ್ದರು ಎಂಬುದು ಟಿ.ವಿ ವಾಹಿನಿಯ ನಿರೂಪಕರಿಗೆ ತಿಳಿದಿತ್ತು ಎಂದೂ ದೂರಿದ್ದಾರೆ.
ಕೇರಳದಲ್ಲಿ ತಮ್ಮ ಸಂಸದರ ಕಚೇರಿ ಗುರಿಯಾಗಿಸಿ ಗಲಾಟೆ ಮಾಡಿದ್ದ ಎಸ್ಎಫ್ಐ ಕಾರ್ಯಕರ್ತರನ್ನು ಕ್ಷಮಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆಯನ್ನು ತಿರುಚಿ ಉದಯಪುರದಲ್ಲಿ ನಡೆದ ಟೇಲರ್ ಹತ್ಯೆ ಪ್ರಕರಣಕ್ಕೆ ಅನ್ವಯಿಸಿ ಹೇಳಿದಂತೆ ವಿಡಿಯೊವನ್ನು ರೂಪಿಸಿದ್ದು, ಬಿಜೆಪಿಯ ಹಲವು ಮುಖಂಡರು ಇದನ್ನು ಹಂಚಿಕೊಂಡಿದ್ದರು.
ತಿರುಚಿದ್ದ ವಿಡಿಯೊ ಪ್ರಸಾರ ಮಾಡಿದ್ದಕ್ಕಾಗಿ ಟಿ.ವಿ ವಾಹಿನಿಯು ಕ್ಷಮೆ ಕೋರಿತ್ತು.
ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.