ನವದೆಹಲಿ: ನಿರ್ಮಾಣ ಯೋಜನೆಗಳಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಮಾದರಿ ಕಾರ್ಯವಿಧಾನಗಳನ್ನು (ಎಸ್ಒಪಿ) ರೂಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ಜಿಟಿ) ಎಲ್ಲ ರಾಜ್ಯಗಳಿಗೆ ಸೂಚಿಸಿದೆ.
ನಿರ್ಮಾಣ ಯೋಜನೆಗಳಲ್ಲಿ ನಿರಂತರವಾಗಿ ಪರಿಸರ ರಕ್ಷಣೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಪರಿಗಣಿಸಿ ಎನ್ಜಿಟಿ ಈ ನಿರ್ದೇಶನ ನೀಡಿದೆ.
ಪುಣೆಯಲ್ಲಿ ‘ಗಂಗಾ ಅಲ್ಟಸ್’ ನಿರ್ಮಾಣ ಯೋಜನೆ ಕೈಗೊಳ್ಳಲು ಮಹಾರಾಷ್ಟ್ರದ ಪರಿಸರ ಪರಿಣಾಮ ಪರಿಶೀಲನಾ ಪ್ರಾಧಿಕಾರ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಎನ್ಜಿಟಿ ಈ ನಿರ್ದೇಶನ ನೀಡಿದೆ.
‘ಮುಂಚಿತವಾಗಿಯೇ ಪರಿಸರ ಅನುಮೋದನೆ ಪಡೆಯದೆಯೇ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಪರಿಸರ ಅನುಮೋದನೆ ನೀಡಲು ಸಮರ್ಪಕವಾದ ಮಾದರಿ ಕಾರ್ಯವಿಧಾನಗಳನ್ನು ರೂಪಿಸಬೇಕು. ಪರಿಸರ ಸಚಿವಾಲಯ ಸಹ ಈ ವಿಷಯವನ್ನು ಪರಿಗಣಿಸಿ ರಾಜ್ಯಗಳಿಗೆ ಪರಿಸರಕ್ಕೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸುತ್ತೋಲೆಯನ್ನು ಕಳುಹಿಸಬೇಕು’ ಎಂದು ಎನ್ಜಿಟಿ ತಿಳಿಸಿದೆ.
‘ಗಂಗಾ ಅಲ್ಟಸ್’ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಪರಿಶೀಲನೆ ಕೈಗೊಳ್ಳಲು ಪರಿಸರ ಸಚಿವಾಲಯ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮಹಾರಾಷ್ಟ್ರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಎನ್ಜಿಟಿ ಇದೇ ಸಂದರ್ಭದಲ್ಲಿ ರಚಿಸಿತು.
ಇದನ್ನೂ ಓದಿ... ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.