ADVERTISEMENT

ಜಲಮೂಲಗಳ ಮೇಲೆ ನಿಗಾವಹಿಸಲು ಪ್ರತಿ ರಾಜ್ಯದಲ್ಲೂ ಸಮಿತಿ ರಚಿಸಿ: ಹಸಿರು ಪೀಠ

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಸಿರು ಪೀಠ ನಿರ್ದೇಶನ

ಪಿಟಿಐ
Published 22 ನವೆಂಬರ್ 2020, 12:06 IST
Last Updated 22 ನವೆಂಬರ್ 2020, 12:06 IST
ಸಾಂದರ್ಭಿಕ ಚಿತ್ರ                                                                                             –ಎಎಫ್‌ಪಿ ಚಿತ್ರ
ಸಾಂದರ್ಭಿಕ ಚಿತ್ರ                                                                                             –ಎಎಫ್‌ಪಿ ಚಿತ್ರ   

ನವದೆಹಲಿ: ಜಲಮೂಲಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೇಲ್ವಿಚಾರಣೆಯಲ್ಲಿ ಈ ವರ್ಷಾಂತ್ಯದೊಳಗೆ ಸಮಿತಿಯ ಸಭೆ ನಡೆಸಬೇಕು. ಸಭೆಯಲ್ಲಿ ರಾಜ್ಯಗಳಲ್ಲಿರುವ ಪ್ರಸ್ತುತ ಜಲಮೂಲಗಳ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಬೇಕು. ಹಾಗೆಯೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಪೀಠ ತಿಳಿಸಿದೆ. ಮುಂದಿನ ವರ್ಷದ ಜನವರಿ 31ರೊಳಗೆ ಈ ಸಮಿತಿಯ ಮೊದಲ ಸಭೆ ನಡೆಸುವಂತೆ ನ್ಯಾಯಮಂಡಳಿ ಸೂಚಿಸಿದೆ.

ರಾಜ್ಯದ ಜಲಮೂಲಗಳ ಮೇಲೆ ನಿಗಾವಹಿಸುವ ಸಂಬಂಧ ವರ್ಷಕ್ಕೆ ಮೂರು ಬಾರಿಯಾದರೂ ಎಲ್ಲ ರಾಜ್ಯಗಳಲ್ಲೂ ನಿಯಮಿತವಾಗಿ ಸಭೆ ನಡೆಸುವಂತೆ ಹಸಿರು ನ್ಯಾಯಪೀಠ, ಕಲುಷಿತ ನದಿಗಳ ಪುನಶ್ಚೇತನಕ್ಕಾಗಿ ರಚಿಸಿರುವ ಕೇಂದ್ರೀಯ ಉಸ್ತುವಾರಿ ಸಮಿತಿಯನ್ನು ಕೇಳಿದೆ. ಮುಂದಿನ ವರ್ಷದ ಮಾರ್ಚ್ 31ರೊಗಳಗೆ ಈ ಸಮಿತಿಯ ಮೊದಲ ಸಭೆ ನಡೆಸಬಹುದು ಎಂದು ಪೀಠ ಹೇಳಿದೆ.

ADVERTISEMENT

‘ಜಲಮೂಲಗಳ ರಕ್ಷಣೆಗಾಗಿ ಇಲ್ಲಿವರೆಗೆ ಕೈಗೊಂಡಿರುವ ಕ್ರಮಗಳ ಸಮರ್ಪಕವಾಗಿಲ್ಲ ಎನ್ನಿಸುತ್ತಿದೆ. ಜಲಮೂಲಗಳನ್ನು ರಕ್ಷಿಸುವುದರಿಂದ ನದಿ ಸೌಂದರ್ಯ ಹೆಚ್ಚುವ ಜತೆಗೆ, ವಾತಾವರಣ ಉತ್ತಮವಾಗುತ್ತದೆ. ಕುಡಿಯಲು ಶುದ್ಧ ನೀರು ಲಭ್ಯವಾಗುತ್ತದೆ. ಜಲಚರಗಳು ವೃದ್ಧಿಯಾಗುತ್ತವೆ, ಅಂತರ್ಜಲ ಮರುಪೂರಣವಾಗುತ್ತದೆ ಮಾತ್ರವಲ್ಲ, ನದಿಗಳ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ' ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹರಿಯಾಣದ ಗುರುಗ್ರಾಮ ಜಿಲ್ಲೆಯಲ್ಲಿರುವ ಘಾಟಾ ಸರೋವರ ಸೇರಿದಂತೆ, 214 ಇತರೆ ಜಲಮೂಲಗಳು ಮತ್ತು ಸ್ವಾಭಾವಿಕ ತೊರೆಗಳು ಹಾಗೂ ಫರಿದಾಬಾದ್‌ನಲ್ಲಿರುವ ಇಂಥದ್ದೇ ಜಲಮೂಲಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಕೋರಿ ಹರಿಯಾಣ ನಿವಾಸಿ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸರ್ವದಮನ್‌ ಸಿಂಗ್ ಒಬೆರಾಯ್ ಸಲ್ಲಿಸಿದ್ದ ಅರ್ಜಿಯನ್ನು ಹಸಿರು ಪೀಠ ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆ ನಂತರ, ದೇಶದ ಪರಿಸರ ರಕ್ಷಣೆಯ ಹಿತಾಸಕ್ತಿಯಿಂದ ಸಿಂಗ್ ಅವರ ಅರ್ಜಿಯಲ್ಲಿನ ವಿಚಾರದ ಪರಿಕಲ್ಪನೆಯನ್ನು ದೇಶದಾದ್ಯಂತ ವಿಸ್ತರಿಸಲು ನ್ಯಾಪೀಠ ತೀರ್ಮಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.