ADVERTISEMENT

ಗಂಗಾ ನದಿ ಮಾಲಿನ್ಯ ಮೇಲ್ವಿಚಾರಣ ಸಮಿತಿಯ ಅವಧಿ ವಿಸ್ತರಿಸಿದ ಎನ್‌ಜಿಟಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 8:32 IST
Last Updated 26 ಡಿಸೆಂಬರ್ 2020, 8:32 IST
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ   

ನವದೆಹಲಿ: ಗಂಗಾ ನದಿಯ ಮಾಲಿನ್ಯದ ಮೇಲ್ವಿಚಾರಣೆ ಮಾಡಲು ಮತ್ತು ಉತ್ತರ ಪ್ರದೇಶದಲ್ಲಿ ಪರಿಸರ ಮಾನದಂಡಗಳ ಅನುಸರಣೆಯನ್ನು ನೋಡಿಕೊಳ್ಳಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಮೇಲ್ವಿಚಾರಣಾ ಸಮಿತಿಯ ಅವಧಿಯನ್ನು ವಿಸ್ತರಿಸಿದೆ.

ಎನ್‌ಜಿಟಿ ಮುಖ್ಯ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ನ್ಯಾಯಪೀಠವು, ಉತ್ತರ ಪ್ರದೇಶ ಸರ್ಕಾರವು ಪರ್ಯಾಯವಾಗಿ ಬೇರೆ ಯಾವುದೇ ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸದ ಹೊರತು ಸಮಿತಿಯನ್ನು ಏಕಾಏಕಿ ಮುಚ್ಚುವುದು ಸೂಕ್ತವಲ್ಲ ಎಂದು ಹೇಳಿದೆ.

ಹಾಗಾಗಿ, ಸದ್ಯಕ್ಕೆ ಮೇಲ್ವಿಚಾರಣಾ ಸಮಿತಿಯ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಲಾಗುವುದು. ಒಂದು ವೇಳೆ ಉತ್ತರ ಪ್ರದೇಶ ಸರ್ಕಾರವು ಬೇರೆ ಯಾವುದೇ ಸಲಹೆಯನ್ನು ಹೊಂದಿದ್ದರೆ, ಅದನ್ನು ನ್ಯಾಯಪೀಠದ ಮುಂದಿಡಲು ಮುಕ್ತ ಅವಕಾಶವನ್ನು ಹೊಂದಿರುತ್ತದೆ ಎಂದು ಅದು ಹೇಳಿದೆ.

ADVERTISEMENT

'ನ್ಯಾಯಮಂಡಳಿಯ ಆದೇಶದ ಪ್ರಕಾರ ಜಿಲ್ಲಾ ಪರಿಸರ ನಿರ್ವಹಣಾ ಯೋಜನೆಗಳ (ಡಿಇಎಂಪಿ) ಸಿದ್ಧತೆಗೆ ನಿರ್ದೇಶನ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಜಿಲ್ಲಾ ಪರಿಸರ ಸಮಿತಿ (ಡಿಇಸಿ) ನಿರ್ವಹಿಸುವ ಕಾರ್ಯಗಳನ್ನು ನೋಡಿಕೊಳ್ಳುವಂತೆ ಮೇಲ್ವಿಚಾರಣಾ ಸಮಿತಿಯನ್ನು ನಾವು ಕೋರುತ್ತೇವೆ' ಎಂದು ನ್ಯಾಯಪೀಠ ಹೇಳಿದೆ.

ಮಾಜಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್‌ವಿಎಸ್ ರಾಥೋಡ್ ನೇತೃತ್ವದ ಮೇಲ್ವಿಚಾರಣಾ ಸಮಿತಿಯ ಅಧಿಕಾರಾವಧಿ ಆರಂಭದಲ್ಲಿ ಆರು ತಿಂಗಳಾಗಿತ್ತು. ನಂತರ ಅದರ ಅಧಿಕಾರವಧಿಯನ್ನು ನ್ಯಾಯಮಂಡಳಿಯು ವಿಸ್ತರಿಸಿದೆ.

ಗಂಗಾ ನದಿ ಮಾಲಿನ್ಯ, ಹಿಂಡಾನ್ ನದಿ ಪುನಶ್ಚೇತನ ಮತ್ತು ಸಂಬಂಧಿತ ಸಮಸ್ಯೆಗಳು, ಅಲಹಾಬಾದ್‌ನಲ್ಲಿ ಮರಳು ಗಣಿಗಾರಿಕೆ, ಸಿಂಗ್ರೌಲಿಯ ಉಷ್ಣ ವಿದ್ಯುತ್ ಕೇಂದ್ರಗಳ ಮಾಲಿನ್ಯ, ಗೋರಖ್‌ಪುರದ ರಾಮ್‌ಗಡ ಸರೋವರ ಮತ್ತು ಅಮಿ ನದಿ ಮಾಲಿನ್ಯ, ಘನ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಮಾನದಂಡಗಳು ಇತ್ಯಾದಿಗಳ ಮೇಲ್ವಿಚಾರಣೆಗೆ ನ್ಯಾಯಮಂಡಳಿಯು ನೇಮಿಸಿದ್ದ ಹಿಂದಿನ ಸಮಿತಿಗಳನ್ನು ಈಗಿನ ಮೇಲ್ವಿಚಾರಣಾ ಸಮಿತಿಯು ಬದಲಾಯಿಸಿತು.

ಜಲಮೂಲಗಳಿಗೆ ಸಂಬಂಧಿಸಿದ ಇತರ ಕೆಲವು ಪರಿಸರ ಸಮಸ್ಯೆಗಳನ್ನು ಕೂಡ ಮೇಲ್ವಿಚಾರಣೆ ನಡೆಸಲು ಸಮಿತಿಯನ್ನು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.