ನವದೆಹಲಿ: ಅಂತರ್ಜಲ ದುರ್ಬಳಕೆ ಹಾಗೂ ವ್ಯರ್ಥವಾಗುವುದನ್ನು ತಡೆಯುವುದಕ್ಕಾಗಿ ತೆಗೆದುಕೊಂಡಿರುವ ಕ್ರಮಗಳು ಅಸಮರ್ಪಕವಾಗಿವೆ ಎಂದು ರಾಷ್ಟ್ರೀಯ ಹಸಿರು ಪೀಠ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ’ನಿರ್ದಿಷ್ಟ ಕಾಲಮಿತಿಯಲ್ಲಿ ಕ್ರಿಯಾ ಯೋಜನೆ ರೂಪಿಸಿ, ಮೇಲ್ವಿಚಾರಣೆ ನೋಡಿಕೊಳ್ಳುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು‘ ಎಂದು ತಿಳಿಸಿದೆ.
ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠ, ‘ ಅಂತರ್ಜಲ ದುರ್ಬಳಕೆ ಮತ್ತು ವ್ಯರ್ಥವಾಗುವುದನ್ನು ನಿಯಂತ್ರಿಸುವ ಸಂಬಂಧ ಜಲ ಶಕ್ತಿ ಸಚಿವಾಲಯ ಮತ್ತು ದೆಹಲಿ ಜಲ ಮಂಡಳಿಯು ಸಲ್ಲಿಸಿರುವ ಪ್ರಮಾಣ ಪತ್ರ ಅಸ್ಪಷ್ಟ ಹಾಗೂ ಸಾಮಾನ್ಯವಾಗಿದೆ. ಅಂತರ್ಜಲ ದುರ್ಬಳಕೆ ತಡೆಯಲು ನಿಯಮಗಳನ್ನು ರೂಪಿಸುವುದಕ್ಕಾಗಿ ರಾಜ್ಯಗಳಿಗೆ ಪತ್ರಗಳನ್ನು ಬರೆಯಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ‘ ಎಂದು ಪೀಠ ಹೇಳಿದೆ.
‘ರಾಜ್ಯಗಳಿಗೆ ಪತ್ರ ಬರೆಯುವುದರ ಜತೆಗೆ, ನಿರ್ದಿಷ್ಟವಾದ ಕಾಲಮಿತಿಯ ಕ್ರಿಯಾ ಯೋಜನೆ ರೂಪಿಸಬೇಕು ಮತ್ತು ಉಸ್ತುವಾರಿ ಮಾಡುವಂತಹ ಕ್ರಮ ಕೈಗೊಳ್ಳಬೇಕು. ಜತೆಗೆ, ಈ ಎಲ್ಲ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಬೇಕಾಗಿತ್ತು‘ ಎಂದು ಪೀಠ ಹೇಳಿದೆ.
ದೆಹಲಿ ಜಲ ಮಂಡಳಿ ಸಲ್ಲಿರುವ ಪ್ರಮಾಣ ಪತ್ರ ಅಸಮರ್ಪಕವಾಗಿದ್ದು, ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಪೀಠ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.