ADVERTISEMENT

ಆಂಧ್ರಪ್ರದೇಶ: ಮಾವೋವಾದಿ ಜತೆ ಸಂಪರ್ಕ ಆರೋಪ: ಎನ್‌ಐಎ ಶೋಧ

ವಕೀಲರು ಮತ್ತು ಲೇಖಕರ ನಿವಾಸಿಗಳಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 20:42 IST
Last Updated 31 ಮಾರ್ಚ್ 2021, 20:42 IST

ಹೈದರಾಬಾದ್‌: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬುಧವಾರ ಸಿವಿಲ್‌ ಲಿಬರ್ಟಿಸ್‌ನ ಹಲವು ಕಾರ್ಯಕರ್ತರು, ವಕೀಲರು ಮತ್ತು ಲೇಖಕರ ನಿವಾಸಗಳಲ್ಲಿ ಶೋಧ ಕಾರ್ಯ ನಡೆಸಿದೆ.

ನಿಷೇಧಿತ ಮಾವೊವಾದಿ ಸಂಘಟನೆಗಳ ಜತೆ ಸಂರ್ಪಕ ಹೊಂದಿದ ಶಂಕೆ ಮೇರೆಗೆ ಈ ಶೋಧ ಕಾರ್ಯ ನಡೆಸಲಾಗಿದೆ.

ಹೈದರಾಬಾದ್‌ ಹಾಗೂ ಆಂಧ್ರಪ್ರದೇಶದ ಹಲವು ನಗರ ಮತ್ತು ಪಟ್ಟಣಗಳಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ರಾಜಮಂಡ್ರಿಯಲ್ಲಿರುವ ಆಂಧ್ರಪ್ರದೇಶ ಸಿವಿಲ್‌ ಲಿಬರ್ಟಿಸ್‌ ಸಮಿತಿ ಅಧ್ಯಕ್ಷ ಚಿಟ್ಟಿಬಾಬು ನಿವಾಸ, ಕರ್ನೂಲ್‌ನಲ್ಲಿರುವ ಕ್ರಾಂತಿಕಾರಿ ಲೇಖಕರ ಸಂಘದ ನಾಯಕರಾದ ಜಿ. ಪಿಣಾಕಪಾನಿ ಅವರ ನಿವಾಸ ಮತ್ತು ಪ್ರೊದ್ಡುತೂರಿನಲ್ಲಿರುವ ವರಲಕ್ಷ್ಮಿ ಅವರ ನಿವಾಸ, ವಿಶಾಖಪಟ್ಟಣದಲ್ಲಿ ವಕೀಲರಾದ ಕೆ. ಪದ್ಮ, ಕೆ.ಎಸ್‌. ಚಲಂ ಅವರ ನಿವಾಸದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆಶೋಧ ಕಾರ್ಯ ನಡೆದಿದೆ.

ಕಳೆದ ವರ್ಷ ನವೆಂಬರ್‌ 23ರಂದು ಪತ್ರಕರ್ತ ಪಂಗಿ ನಾಗಣ್ಣ ಬಳಿ ಮಾವೊವಾದಿ ಸಂಘಟನೆ ಕುರಿತು ಮಾಹಿತಿಗಳು, ಪತ್ರಿಕಾ ಹೇಳಿಕೆಗಳು, ಔಷಧಗಳು ಮತ್ತಿತರ ಕೆಲವು ವಸ್ತುಗಳು ದೊರೆತಿದ್ದವು. ಪೊಲೀಸರ ಚಲನವಲನದ ಬಗ್ಗೆ ಮಾವೊವಾದಿ ಸಂಘಟನೆಗಳಿಗೆ ಪಂಗಿ ಮಾಹಿತಿ ರವಾನಿಸುತ್ತಿದ್ದ ಎಂದು ದೂರಲಾಗಿತ್ತು. ಈ ಬಗ್ಗೆ ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕೆ ಮಾರ್ಚ್‌ 7ರಂದು ಎನ್‌ಐಎಗೆ ಈ ಪ್ರಕರಣವನ್ನು ವರ್ಗಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.