ADVERTISEMENT

ನಿರ್ಭಯಾ ಅತ್ಯಾಚಾರಿಗಳಿಗೆ ಫೆ.1ರಂದು ಗಲ್ಲು 

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 12:21 IST
Last Updated 17 ಜನವರಿ 2020, 12:21 IST
   

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳನ್ನು ಫೆ.1ರ ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕು ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಹೊಸ ವಾರಂಟ್‌ ಜಾರಿ ಮಾಡಿದೆ.

ಇದೇ 22ರಂದು ನಿಗದಿಯಾಗಿದ್ದ ಮರಣ ದಂಡನೆಯನ್ನು ಮುಂದೂಡುವಂತೆ ಕೋರಿ ನಾಲ್ವರು ಅಪರಾಧಿಗಳ ಪೈಕಿ ಮುಕೇಶ್‌ ಕುಮಾರ್‌ ಸಿಂಗ್‌ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದ. ಈ ಮಧ್ಯೆ ರಾಷ್ಟಪತಿಗಳು ಮುಕೇಶ್‌ನ ಕ್ಷಮಾದಾನದ ಅರ್ಜಿ ತಿರಸ್ಕರಿಸಿದ್ದರು. ಅಲ್ಲದೆ, ಗಲ್ಲು ಶಿಕ್ಷೆ ಜಾರಿಗೆ ಹೊಸ ದಿನಾಂಕ ನಿಗದಿ ಮಾಡುವಂತೆ ಕೋರಿ ತಿಹಾರ್‌ ಜೈಲು ಅಧಿಕಾರಿಗಳು ದೆಹಲಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

ಇದೆಲ್ಲವನ್ನೂ ಹಿನ್ನೆಲೆಯಾಗಿಟ್ಟುಕೊಂಡು ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸತೀಶ್‌ಕುಮಾರ್‌ ಅರೋರಾ ಅವರು ಫೆ.1ರಂದು ಗಲ್ಲು ಜಾರಿ ಮಾಡುವಂತೆ ವಾರಂಟ್‌ ಹೊರಡಿಸಿದ್ದಾರೆ.

ADVERTISEMENT

ನಿಯಮಗಳ ಪ್ರಕಾರ ಅಪರಾಧಿಯ ಕ್ಷಮಾದಾನದ ಅರ್ಜಿ ತಿರಸ್ಕಾರಗೊಂಡ ಎರಡು ವಾರಗಳ ನಂತರ ಆತನಿಗೆ ಗಲ್ಲು ಜಾರಿಗೊಳಿಸಬೇಕು. ಇದೇ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಫೆ. 1ಕ್ಕೆ ಗಲ್ಲು ಶಿಕ್ಷೆ ನಿಗದಿಗೊಳಿಸಿದ್ದಾರೆ.

ಅದರಂತೆ ಫೆ. 1ರಂದು ವಿನಯ್‌ ಶರ್ಮಾ, ಮುಕೇಶ್‌ ಸಿಂಗ್‌, ಅಕ್ಷಯ್‌ ಕುಮಾರ್‌ ಸಿಂಗ್‌ ಮತ್ತು ಪವನ್‌ ಗುಪ್ತಾನನ್ನು ನೇಣಿಗೇರಿಸಲಾಗುತ್ತದೆ.

ದೆಹಲಿಯ ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ನಿರ್ಭಯಾಳನ್ನು 2012ರ ಡಿ. 16ರಂದು ಚಲಿಸುವ ಬಸ್‌ನಲ್ಲೇ ಅತ್ಯಾಚಾರ ಮಾಡಿದ್ದ ದುಷ್ಕರ್ಮಿಗಳು ಆಕೆಯ ದಾಳಿ ನಡೆಸಿತೀವ್ರವಾಗಿ ಗಾಯಗೊಳಿಸಿದ್ದರು. ಚಿಕಿತ್ಸೆ ಫಲಿಸದೇ ಡಿ. 29ರಂದು ನಿರ್ಭಯಾ ಕೊನೆಯುಸಿರೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.