ADVERTISEMENT

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ತಿಹಾರ್‌ ಜೈಲಿನಲ್ಲಿ ನಡೆಯಿತು ಅಣಕು ತಾಲೀಮು

ಪಿಟಿಐ
Published 13 ಜನವರಿ 2020, 12:32 IST
Last Updated 13 ಜನವರಿ 2020, 12:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ಗಲ್ಲಿಗೇರಿಸಲಿದ್ದು, ಈ ಹಿನ್ನೆಲೆಯಲ್ಲಿ ತಿಹಾರ್ ಜೈಲಿನಲ್ಲಿ ಭಾನುವಾರ ಅಣಕು ತಾಲೀಮು ನಡೆಸಲಾಯಿತು ಎಂದು ಜೈಲುಅಧಿಕಾರಿಗಳು ತಿಳಿಸಿದ್ದಾರೆ.

‘ಜೈಲು ಅಧಿಕಾರಿಗಳ ತಂಡ ಭಾನುವಾರ ಗಲ್ಲಿಗೇರಿಸುವ ಅಣಕು ತಾಲೀಮು ನಡೆಸಿತು. ಅಪರಾಧಿಗಳ ತೂಕಕ್ಕೆ ತಕ್ಕಂತೆ ಕಲ್ಲು ಮತ್ತು ಮರಳನ್ನು ಗೋಣಿಚೀಲದಲ್ಲಿ ತುಂಬಿ, ಗಲ್ಲಿಗೇರಿಸಲು ಬಳಸಲಿರುವ ಹಗ್ಗವನ್ನೇ ತಾಲೀಮಿಗೆ ಬಳಸಲಾಯಿತು. ತಿಹಾರ್ ಜೈಲಿನ ಕೊಠಡಿ ನಂ. 3ರಲ್ಲಿ ಗಲ್ಲಿಗೇರಿಸುವ ಪ್ರಕ್ರಿಯೆ ನಡೆಯಲಿದ್ದು, ತಾಲೀಮು ಕೂಡಾ ಇದೇ ಕೊಠಡಿಯಲ್ಲಿ ನಡೆಸಲಾಯಿತು’ ಎಂದು ತಿಹಾರ್ ಜೈಲಿನ ಅಧಿಕಾರಿಗಳು ವಿವರಿಸಿದ್ದಾರೆ.

‘ಮೀರತ್‌ನ ಪವನ್ ಜಲ್ಲಾದ್ ನಾಲ್ವರು ಅಪರಾಧಿಗಳನ್ನು ಜ. 22ರಂದು ಬೆಳಿಗ್ಗೆ 7ಕ್ಕೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಿದ್ದಾರೆ. ಪವನ್ ಅವರನ್ನು ಮೀರತ್‌ನಿಂದ ದೆಹಲಿಗೆ ಕಳಿಸಿರುವ ಕುರಿತು ಉತ್ತರ ಪ್ರದೇಶದ ಜೈಲು ಪ್ರಾಧಿಕಾರ ತಿಳಿಸಿದೆ. ನಾಲ್ವರು ಅಪರಾಧಿಗಳನ್ನೂ ಏಕಕಾಲಕ್ಕೆ ಗಲ್ಲಿಗೇರಿಸಲಾಗುವುದು. ಜೈಲಿನ ಅಧಿಕಾರಿಗಳು ನಿತ್ಯವೂ ಆರೋಪಿಗಳೊಂದಿಗೆ ಸಂವಹನ ನಡೆಸುತ್ತಿದ್ದು, ಅವರ ಮಾನಸಿಕ ಆರೋಗ್ಯ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಗಮನಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಅಪರಾಧಿಗಳಾದ ಮುಕೇಖ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ಅವರಿಗೆ ಗಲ್ಲುಶಿಕ್ಷೆ ವಿಧಿಸುವಂತೆ ದೆಹಲಿಯ ನ್ಯಾಯಾಲಯ ಜ. 7ರಂದು ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.