ನವದೆಹಲಿ: ಬಿಹಾರದ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಇತ್ತೀಚಿನವರೆಗೂ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ (ಪಿಕೆ) ಮಧ್ಯೆ ವಾಕ್ಸಮರ ತೀವ್ರಗೊಂಡಿದೆ.
‘ಪ್ರಶಾಂತ್ ಅವರು ಪಕ್ಷದಲ್ಲಿ ಇದ್ದರೂ ಒಳ್ಳೆಯದೇ, ಬಿಟ್ಟರೂ ಒಳ್ಳೆಯದೇ’ ಎಂದು ಮಂಗಳವಾರ ಹೇಳಿರುವ ನಿತೀಶ್ ಅವರು, ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ‘ಬಿಜೆಪಿ ಮುಖಂಡ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಪ್ರಶಾಂತ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು’ ಎಂದಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕ ಪ್ರಶಾಂತ್ ಉತ್ತರಿಸಿದ್ದಾರೆ. ‘ಹೇಗೆ ಮತ್ತು ಯಾಕೆ ನನ್ನನ್ನು ಜೆಡಿಯುಗೆ ಸೇರಿಸಿಕೊಂಡಿರಿ ಎಂದು ಸುಳ್ಳು ಹೇಳುವಷ್ಟು ಕೆಳಮಟ್ಟಕ್ಕೆ ನೀವು ಇಳಿದಿದ್ದೀರಿ... ನನ್ನದು ಮತ್ತು ನಿಮ್ಮದು ಒಂದೇ ಬಣ್ಣ ಎಂದು ತೋರಿಸಲು ಮಾಡುತ್ತಿರುವ ಯತ್ನ ಪೇಲವವಾಗಿದೆ. ನಿಮ್ಮ ಹೇಳಿಕೆ ನಿಜವೇ ಆಗಿದ್ದರೆ, ಅಮಿತ್ ಶಾ ಶಿಫಾರಸು ಮಾಡಿದ ವ್ಯಕ್ತಿಯ ಮಾತನ್ನು ಕೇಳದಿರುವಷ್ಟು ಧೈರ್ಯ ನಿಮಗೆ ಇದೆ ಎಂಬುದನ್ನು ಯಾರಾದರೂ ನಂಬಲು ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.