ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಒಂದೇಒಂದು ಸಾವಿನ ಪ್ರಕರಣ ವರದಿಯಾಗಿಲ್ಲ.2020ರ ಏಪ್ರಿಲ್ ಬಳಿಕ ಇದೇಮೊದಲ ಬಾರಿಗೆ ಒಂದು ದಿನದ ಅವಧಿಯಲ್ಲಿ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದುದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 100 ಜನರಿಗೆ ಕೋವಿಡ್-19 ಸೋಂಕು ತಗುಲಿದೆ. ಇದೇ ವೇಳೆ 144 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈ ವರೆಗೆ ಒಟ್ಟು 6,36,260 ಸೋಂಕು ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿದ್ದು, ಇದರಲ್ಲಿ 6,24,326 ಮಂದಿ ಗುಣಮುಖರಾಗಿದ್ದಾರೆ. 10,882 ಸೋಂಕಿತರು ಮೃತಪಟ್ಟಿದ್ದಾರೆ.
ಸಾವಿನ ಪ್ರಕರಣ ವರದಿಯಾಗದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ʼದೆಹಲಿ ನಿವಾಸಿಗಳಿಗೆ ಸಿಹಿ ಸುದ್ದಿ. ಇಂದು ದೆಹಲಿಯಲ್ಲಿ ಕೋವಿಡ್-19ನಿಂದ ಒಂದೂ ಸಾವಿನ ಪ್ರಕರಣ ವರದಿಯಾಗಿಲ್ಲ. ದೆಹಲಿ ನಿವಾಸಿಗಳಿಗೆ ಅಭಿನಂದನೆಗಳು. ಕೊರೊನಾವೈರಸ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಲಸಿಕೆ ಅಭಿಯಾನ ಉತ್ತಮ ವೇಗದಲ್ಲಿ ಸಾಗುತ್ತಿದೆ. ನಗರದ ನಿವಾಸಿಗಳೆಲ್ಲ ಕೊರೊನಾವೈರಸ್ ವಿರುದ್ಧ ತುಂಬಾ ಕಠಿಣವಾದ ಯುದ್ಧ ಮಾಡಿದ್ದೇವೆ.ಮುಂದೆಯೂ ಜಾಗರೂಕರಾಗಿರಬೇಕಿದೆʼ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಈವರೆಗೆ 1.11 ಕೋಟಿ ಜನರಿಗೆ ಕೋವಿಡ್-19 ಸೋಂಕು ಪರೀಕ್ಷೆ ನಡೆಸಲಾಗಿದೆ.
ದೇಶದಲ್ಲಿ ಇದುವರೆಗೆ ಒಟ್ಟು 1,05,48,521 ಸೋಂಕಿತರು ಚೇತರಿಸಿಕೊಂಡಿದ್ದು, 1,55,158 ಮಂದಿ ಮೃತಪಟ್ಟಿದ್ದಾರೆ. ಇನ್ನೂ 1,43,625 ಸಕ್ರಿಯ ಪ್ರಕರಣಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.