ಜೈಪುರ: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ ತರಬೇತಿ ಪಡೆಯಲು ಬರುವ ವಿದ್ಯಾರ್ಥಿಗಳ ಪೈಕಿ ಅಗ್ರ ಸ್ಥಾನ ಪಡೆದವರನ್ನು ವೈಭವೀಕರಿಸಬಾರದು ಎಂಬುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ರಾಜಸ್ಥಾನ ಸರ್ಕಾರ ಬಿಡುಗಡೆ ಮಾಡಿದೆ.
9 ಪುಟಗಳಷ್ಟು ಇರುವ ಮಾರ್ಗಸೂಚಿಗಳನ್ನು ರಾಜ್ಯದಲ್ಲಿರುವ ಎಲ್ಲ ತರಬೇತಿ ಕೇಂದ್ರಗಳಿಗೆ ನೀಡಲಾಗಿದೆ.
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ತರಬೇತಿ ನೀಡುವ ಕೇಂದ್ರಗಳಿಗೆ ಪ್ರಸಿದ್ಧವಾಗಿರುವ ಕೋಟಾದಲ್ಲಿ ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು, ಪರಿಶೀಲನೆ ನಡೆಸಲು ನೇಮಿಸಿದ್ದ ಶಿಕ್ಷಣ ಕಾರ್ಯದರ್ಶಿ ಭವಾನಿ ಸಿಂಗ್ ದೇಥಾ ನೇತೃತ್ವದ ಸಮಿತಿಯು ಸಲ್ಲಿಸಿರುವ ವರದಿ ಆಧಾರದಲ್ಲಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ.
ತರಬೇತಿ ಅವಧಿಯಲ್ಲಿ ನಡೆಸಲಾಗುವ ಕಿರುಪರೀಕ್ಷೆಗಳ ಅಂಕಗಳನ್ನು ಗೌಪ್ಯವಾಗಿ ಇಡಬೇಕು, ವಿದ್ಯಾರ್ಥಿಗಳ ರ್ಯಾಂಕ್ ಆಧಾರದಲ್ಲಿ ವಿಶೇಷ ಬ್ಯಾಚ್ಗಳನ್ನು ಮಾಡಬಾರದು, ತರಬೇತಿಯಿಂದ ನಿರ್ಗಮಿಸುವುದಕ್ಕೆ ಹಾಗೂ 120 ದಿನಗಳ ಒಳಗಾಗಿ ಶುಲ್ಕ ಮರುಪಾವತಿಗೆ ಅವಕಾಶ ಇರುವಂತೆ ನೀತಿ ರೂಪಿಸಬೇಕು ಎಂಬದು ಸೇರಿದಂತೆ ಹಲವಾರು ಅಂಶಗಳನ್ನು ಮಾರ್ಗಸೂಚಿಗಳು ಒಳಗೊಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.