ತಿರುಪತಿ:ಚಿಕಿತ್ಸೆಗೆ ಸಹಕರಿಸದೇ, ಎಲ್ಲೆಂದರಲ್ಲಿ ಸ್ವೇಚ್ಛೆಯಿಂದ ಓಡಾಡಿಕೊಂಡಿರುವ ತಬ್ಲಿಗಿಗಳು ಜನರಲ್ಲಿ ಸೋಂಕು ಹರುಡುತ್ತಿದ್ದಾರೆ ಎಂದು ಆಂಧ್ರ ಉಪ ಮುಖ್ಯಮಂತ್ರಿ ಕೆ. ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಅಲ್ಲದೆ, ದೆಹಲಿಯ ಜಾಮಾತ್ನಿಂದ ಹಿಂದಿರುಗಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಗುಲಗಳ ಪಟ್ಟಣ ಎಂದೇ ಪ್ರಸಿದ್ಧವಾಗಿರುವ ತಿರುಪತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ನಾರಾಯಣಸ್ವಾಮಿ, ತಬ್ಲಿಗಿಗಳ ಆಹಾರ ಪದ್ಧತಿ, ಶುಚಿತ್ವವಿಲ್ಲದ ಜೀವನ ಕ್ರಮಗಳನ್ನು ಪ್ರಶ್ನೆ ಮಾಡಿದ್ದಾರೆ.
‘ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ 25–26 ಇರಲಿಲ್ಲ. ಆದರೆ ದೆಹಲಿಯ ಮರ್ಕಜ್ನಿಂದ ಬಂದ ತಬ್ಲಿಗಿಗಳು ರಾಜ್ಯದಲ್ಲಿ ಸೋಂಕನ್ನು ಹರಿಡಿದರು,’ ಎಂದು ಅವರು ಆರೋಪಿಸಿದರು.
‘ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ನನಗ್ಯಾವ ದ್ವೇಷವಿಲ್ಲ. ಅವರು ಅವರ ದೇವರನ್ನು ಪೂಜಿಸಲಿ. ಅಲ್ಲಾಹು ದಯಾಮಯಿ. ಆದರೆ, ತಬ್ಲಿಗಿಗಳು ಮಾಡುತ್ತಿರುವುದೆಲ್ಲವೂ ಅಸಹ್ಯದ ಕೆಲಸಗಳು. ಅವರು ಉತ್ತಮ ಆಹಾರ ಸೇವಿಸುವುದಿಲ್ಲ. ಶುಚಿತ್ವ ಪಾಲಿಸುವುದಿಲ್ಲ. ಅವರ ಅಭ್ಯಾಸಗಳಿಂದಾಗಿ ಕೊರೊನಾ ವೈರಸ್ ಈ ಹಂತಕ್ಕೆ ಹರಡಿದೆ,’ ಎಂದು ಅವರು ಕಿಡಿ ಕಾರಿದರು.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತಬ್ಲಿಗಿ ಜಮಾತ್ ಸಮಾವೇಶವನ್ನು ಇತ್ತೀಚೆಗಷ್ಟೇ ಸಮರ್ಥಿಸಿಕೊಂಡಿದ್ದರು. ಅವರ ಹೇಳಿಕೆ ಬೆನ್ನಿಗೇ ಉಪ ಮುಖ್ಯಮಂತ್ರಿ ನಾರಾಯಣಸ್ವಾಮಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
‘ದೇಶದಲ್ಲಿ ಕೋವಿಡ್ 19 ಹರಡುತ್ತಿರುವುದಕ್ಕೆ ನಿರ್ದಿಷ್ಟ ಧರ್ಮದ ಧಾರ್ಮಿಕ ಸಭೆಯ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ರವಿಶಂಕರ್ ಗುರೂಜಿ, ಜಗ್ಗಿ ವಾಸುದೇವ್ ಅಥವಾ ಮಾತಾ ಅಮೃತಾನಂದಮಾಯಿ ಅವರು ಆಯೋಜಿಸುವ ಯಾವುದೇ ಧಾರ್ಮಿಕ ಸಭೆಯಲ್ಲೂ ಇದು ಸಂಭವಿಸಬಹುದು,’ ಎಂದು ಜಗನ್ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.