ADVERTISEMENT

ಗುಜರಾತ್ ಫಲಿತಾಂಶ ‘ಭಾರತ್‌ ಜೋಡೊ’ ಯಾತ್ರೆ ಮೇಲೆ ಪರಿಣಾಮ ಬೀರದು: ಜೈರಾಂ ರಮೇಶ್

ಪಿಟಿಐ
Published 10 ಡಿಸೆಂಬರ್ 2022, 13:03 IST
Last Updated 10 ಡಿಸೆಂಬರ್ 2022, 13:03 IST
ಜೈರಾಂ ರಮೇಶ್
ಜೈರಾಂ ರಮೇಶ್   

ಬುಂದಿ (ರಾಜಸ್ಥಾನ): ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶವು ‘ಭಾರತ್ ಜೋಡೊ’ ಯಾತ್ರೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು. ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ವಿಶ್ಲೇಷಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್ ಹೇಳಿದರು.

‘ಚುನಾವಣೆಯ ಸಮಯದಲ್ಲಿ ಗುಜರಾತ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಆಡಳಿತವನ್ನು ದುರುಪಯೋಗ ಪಡಿಸಿಕೊಂಡಿವೆ. ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಬಾಲಕಿಯೊಬ್ಬಳನ್ನು ಬಳಸಿಕೊಂಡ ಬಗ್ಗೆ ಕಾಂಗ್ರೆಸ್ ನೀಡಿದ್ದ ದೂರಿನ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಗುಜರಾತ್‌ನಲ್ಲಿ ಬಿಜೆಪಿ, ಎಎಪಿ ಮತ್ತು ಎಐಎಂಐಎಂ ಮೂವರು ಒಗ್ಗಟ್ಟಾಗಿ ಕಾಂಗ್ರೆಸ್‌ಗೆ ಅಡ್ಡಿಯನ್ನುಂಟು ಮಾಡಿದವು ಎಂದು ಹೇಳಿದ ಅವರು, ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ಕೆಲವು ಲೋಪದೋಷಗಳಿವೆ ಎಂಬುದನ್ನೂ ಒಪ್ಪಿಕೊಂಡರು.

ADVERTISEMENT

‘ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕರಿಗೆ ಯಾವ ಕ್ರಮಕೈಗೊಳ್ಳಬೇಕೆಂಬುದು ಗೊತ್ತಿದೆ’ ಎಂದೂ ಅವರು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಮಾಡಿದರೂ, ಗುಡ್ಡಗಾಡು ರಾಜ್ಯದಲ್ಲಿ ‘ಡಬಲ್ ಎಂಜಿನ್ ಸರ್ಕಾರವು ಹಳಿತಪ್ಪಿತು’. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಜನಾದೇಶ ಪಡೆದಿರುವುದು ಪಕ್ಷಕ್ಕೆ ಒಂದು ರೀತಿಯ ಬೂಸ್ಟರ್ ಡೋಸ್ ಆಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.