ADVERTISEMENT

ದೆಹಲಿಯ ಕೈಗಾರಿಕಾ ಪ್ರದೇಶಗಳಲ್ಲಿ ತಯಾರಿಕಾ ಘಟಕಗಳಿಗೆ ಇಲ್ಲ ಅನುಮತಿ: ಕೇಜ್ರಿವಾಲ್

ಪಿಟಿಐ
Published 2 ನವೆಂಬರ್ 2020, 15:48 IST
Last Updated 2 ನವೆಂಬರ್ 2020, 15:48 IST
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ರಾಷ್ಟ್ರೀಯ ರಾಜಧಾನಿಯಲ್ಲಿ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ನಗರದ ಹೊಸ ಕೈಗಾರಿಕಾ ಪ್ರದೇಶಗಳಲ್ಲಿ ತಯಾರಿಕಾ ಘಟಕಗಳಿಗೆ ಅನುಮತಿ ನೀಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಕೈಗಾರಿಕೆಗಳ ಅನುಮತಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಸಲ್ಲಿಸಿದ್ದ 'ದೆಹಲಿ ಮಾಸ್ಟರ್‌ ಪ್ಲಾನ್‌ 2021' ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಹೊಸ ಕೈಗಾರಿಕೆ ಪ್ರದೇಶಗಳಲ್ಲಿ ಕೇವಲ ಸೇವೆ ಹಾಗೂ ಹೈ–ಟೆಕ್‌ ಕೈಗಾರಿಕೆಗಳ ಕಾರ್ಯಾಚರಣೆಗೆ ಮಾತ್ರ ಅನುಮತಿ ಸಿಗಲಿದೆ.

ಈಗಾಗಲೇ ಕಾರ್ಯಾಚರಿಸುತ್ತಿರುವ ತಯಾರಿಕಾ ಘಟಕಗಳ ಪೈಕಿ ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳಿಗೆ ಹೈ–ಟೆಕ್‌ ಆಗಲು ಅಥವಾ ಸೇವಾ ವಲಯಗಳಿಗೆ ಬದಲಿಸಿಕೊಳ್ಳಲು ಆಯ್ಕೆಗಳನ್ನು ನೀಡಲಾಗುತ್ತದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ADVERTISEMENT

ದೆಹಲಿಯಲ್ಲಿ ಮುಂದೆ ಮಾಲಿನ್ಯಕಾರಕ ಕೈಗಾರಿಕೆಗಳು ಇರುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ದೆಹಲಿಯ ಆರ್ಥಿಕತೆ ಪ್ರಮುಖವಾಗಿ ಸೇವಾ ವಲಯ ಆಧಾರಿತವಾಗಿದ್ದು, ಹೈ–ಟೆಕ್‌ ಮತ್ತು ಸೇವಾ ವಲಯಗಳಿಗೆ ಕೈಗಾರಿಕಾ ಪ್ರದೇಶಗಳಲ್ಲಿ ಕಡಿಮೆ ದರದಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಲಾಗುತ್ತದೆ. ಈವರೆಗೂ ಸೇವೆ ಮತ್ತು ಹೈ–ಟೆಕ್‌ ಕೈಗಾರಿಕೆಗಳು ವಾಣಿಜ್ಯ ಪ್ರದೇಶಗಳಲ್ಲಿ ಮಾತ್ರ ಕಾರ್ಯಾಚರಿಸಲು ಅವಕಾಶವಿತ್ತು. ವಾಣಿಜ್ಯ ಪ್ರದೇಶಗಳಲ್ಲಿ ಅಧಿಕ ದರದ ಕಾರಣಗಳಿಂದ ದೆಹಲಿಯನ್ನು ಬಿಟ್ಟು ಗುರುಗ್ರಾಮ, ನೋಯ್ಡಾ ಹಾಗೂ ಫರಿದಾಬಾದ್‌ನತ್ತ ತೆರಳುತ್ತಿದ್ದವು ಎಂದಿದ್ದಾರೆ.

ಮಾಧ್ಯಮಗಳ ಕಚೇರಿಗಳು, ಸಾಫ್ಟ್‌ವೇರ್‌ ಇಂಡಸ್ಟ್ರಿ ಹಾಗೂ ಐಟಿ ಸೇವೆಗಳು, ಬಿಪಿಒಗಳು, ಐಟಿಇಎಸ್‌, ಶಿಕ್ಷಣ ಸಂಸ್ಥೆಗಳು, ಇಂಟರ್‌ನೆಟ್‌ ಮತ್ತು ಇಮೇಲ್‌ ಸೇವಾ ಸಂಸ್ಥೆಗಳು, ಟಿವಿ ಕಾರ್ಯಕ್ರಮ ನಿರ್ಮಾಣ, ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಹಲವು ವಲಯಗಳಿಗೆ ಹೊಸ ಕೈಗಾರಿಕಾ ಪ್ರದೇಶಗಳಲ್ಲಿ ಅವಕಾಶ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.