ಮುಂಬೈ: ವಿರೋಧ ಪಕ್ಷಗಳ ಬಣ 'ಇಂಡಿಯಾ' ಮೈತ್ರಿಕೂಟದ ಸಂಚಾಲಕ ಅಥವಾ ಅಧ್ಯಕ್ಷರ ನೇಮಕಕ್ಕೆ ಯಾವುದೇ ಸಭೆ ನಡೆದಿಲ್ಲ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಸೋಮವಾರ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಸ್ವಲ್ಪ ಸಮಯ ಉಳಿದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 19, 2023ರಂದು ಸಭೆ ಸೇರಿದ್ದ ಇಂಡಿಯಾ ಬಣದ ನಾಯಕರು, ಸೀಟು ಹಂಚಿಕೆ ಆದಷ್ಟು ಬೇಗ ಅಂತಿಮಗೊಳಿಸುವ ಕುರಿತಂತೆ ಚರ್ಚಿಸಿದ್ದರು.
ಸಭೆಯಲ್ಲಿ, ಕೆಲವು ನಾಯಕರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆರನ್ನು ಪ್ರಸ್ತಾಪಿಸಿದ್ದರು. ಆದರೆ, ಕಾಂಗ್ರೆಸ್ ಅಧ್ಯಕ್ಷರು, ಮೊದಲು ಗೆಲ್ಲುವುದು ಮುಖ್ಯ ಮತ್ತು ನಾಯಕತ್ವದ ವಿಷಯವನ್ನು ಪ್ರಜಾಸತ್ತಾತ್ಮಕವಾಗಿ ನಿರ್ಧರಿಸಬಹುದು ಎಂದು ಹೇಳಿದ್ದರು. ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತಿಪಕ್ಷಗಳ ಮೈತ್ರಿಕೂಟದ ಸಂಚಾಲಕರಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾವುತ್, ಇಂಡಿಯಾ ಬಣದ ಸಂಚಾಲಕರ ನೇಮಕಕ್ಕೆ ಯಾವುದೇ ಸಭೆ ನಡೆದಿಲ್ಲ, ದೆಹಲಿಯಲ್ಲಿ ನಡೆದ ಕೊನೆಯ ಸಭೆಯಲ್ಲೂ ಸಹ ಅಂತಹ ಪ್ರಸ್ತಾಪವಿರಲಿಲ್ಲ ಎಂದಿದ್ದಾರೆ.
ಕಳೆದ ತಿಂಗಳು, ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ' ಪತ್ರಿಕೆಯ ಸಂಪಾದಕೀಯದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸಲು 'ಸಾರಥಿ' ಅನ್ನು ನೇಮಿಸಬೇಕೆಂದು ಸಲಹೆ ನೀಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.