
ಆರ್. ಅಶ್ವಿನ್
ಚೆನ್ನೈ: ಮಿಚಾಂಗ್ ಚಂಡಮಾರುತದ ಅಬ್ಬರದಿಂದ ತತ್ತರಿಸಿರುವ ಚೆನ್ನೈ ನಗರದ ಜನರ ಸವಾಲಿನ ಸನ್ನಿವೇಶವನ್ನು ವಿವರಿಸಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್, ತಾವು ವಾಸವಿರುವ ಸ್ಥಳದಲ್ಲಿ 30 ಗಂಟೆಗಳವರೆಗೆ ವಿದ್ಯುತ್ ಕಡಿತದ ಬಗ್ಗೆ ಹೇಳಿಕೊಂಡಿದ್ದಾರೆ.
ಮಿಚಾಂಗ್ ಚಂಡಮಾರುತವು ತಮಿಳುನಾಡು ಮತ್ತು ನೆರೆಯ ರಾಜ್ಯಗಳಲ್ಲಿ ಭಾರಿ ಹಾನಿ ಸೃಷ್ಟಿಸಿದೆ. ಚೆನೈನಲ್ಲಿ ಮಂಗಳವಾರ ಮಳೆಯ ಆರ್ಭಟ ಕಡಿಮೆ ಆಯಿತಾದರೂ ಹಲವೆಡೆ ಜಲಾವೃತ, ವಿದ್ಯುತ್ ಕಡಿತ, ಮೊಬೈಲ್ ನೆಟ್ವರ್ಕ್ ಸಮಸ್ಯೆಗಳು ಇದ್ದವು.
‘ನಾನು ವಾಸವಿರುವ ಸ್ಥಳದಲ್ಲಿ 30 ಗಂಟೆಗಿಂತ ಹೆಚ್ಚಿನ ಸಮಯ ವಿದ್ಯುತ್ ಕಡಿತವಾಗಿತ್ತು. ಬೇರೆ ಪ್ರದೇಶಗಳ ಸ್ಥಿತಿ ಏನಾಗಿರಬಹುದು ಎಂದು ಊಹಿಸಿ. ಚೆನ್ನೈ ಪ್ರವಾಹದ ಸಮಸ್ಯೆಗೆ ಯಾವ ಆಯ್ಕೆಗಳಿವೆ ಎಂಬುದು ನನಗೆ ತಿಳಿಯುತ್ತಿಲ್ಲ’ಎಂದು ಅಶ್ವಿನ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಚೆನ್ನೈ ನಿವಾಸಿಯಾಗಿರುವ ಅಶ್ವಿನ್ ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಕುರಿತಾದ ವಿಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.
ಇದಕ್ಕೂ ಮುನ್ನ ಸೋಮವಾರ ಎಕ್ಸ್ನಲ್ಲಿ, ಇನ್ನೊಂದು ದಿನ ತಾಳ್ಮೆಯಿಂದ ಕಾಯಿರಿ. ಮಳೆ ನಿಂತರೂ ಪರಿಸ್ಥಿತಿ ಸುಧಾರಿಸಲು ಸಮಯ ಹಿಡಿಯುತ್ತದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.