ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳ ಅಪರಾಧ ಪ್ರಕರಣ ಹೆಚ್ಚಾಗಿಲ್ಲ: ಪ್ರಿಯಾಂಕ ಕನೂಂಗೂ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ

ಪಿಟಿಐ
Published 23 ಆಗಸ್ಟ್ 2020, 9:12 IST
Last Updated 23 ಆಗಸ್ಟ್ 2020, 9:12 IST
ಎನ್‌ಸಿಪಿಸಿಆರ್‌
ಎನ್‌ಸಿಪಿಸಿಆರ್‌   

ನವದೆಹಲಿ: ದೇಶದಾದ್ಯಂತ ಕೊರೊನಾ – ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳ ಮೇಲಿನ ಅಪರಾಧಗಳ ಕುರಿತ ದೂರುಗಳ ಸಂಖ್ಯೆಹೆಚ್ಚಾಗಿಲ್ಲ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ ಕನೂಂಗೂ ಹೇಳಿದ್ದಾರೆ.

ಕೊರೊನಾ – ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿತ್ತು. ಹೀಗಾಗಿ, ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿಲ್ಲ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರ ವಲಸೆ ಆರಂಭವಾಗಿದ್ದು, ಆ ವೇಳೆಯಲ್ಲಿ ತಮ್ಮ ತಮ್ಮ ರಾಜ್ಯದಲ್ಲಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಅಗತ್ಯವಾದ ಊಟ ಮತ್ತು ವಸತಿ ನೀಡುವಂತೆ ಆಯಾ ಸರ್ಕಾರಗಳಿಗೆ ಆಯೋಗ ಸೂಚನೆ ನೀಡಿತ್ತು. ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್ ಘೋಷಣೆಯಾದ ನಂತರ ಕಾರ್ಮಿಕ ಮಕ್ಕಳಿಗೆ ದಿನಸಿ ಮತ್ತು ಹಾಲು ಪೂರೈಸುವ ಮೂಲಕ ಅವರ ಹಕ್ಕುಗಳನ್ನು ರಕ್ಷಿಸಲಾಯಿತು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ಆಯೋಗಕ್ಕೆ ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿವೆ. ಈ ದೂರುಗಳಿಗೆ ಸಂಬಂಧಿಸಿದಂತೆ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಆನ್‌ಲೈನ್ ತರಗತಿಗೆ ಶುಲ್ಕ ತೆಗೆದುಕೊಂಡಿರುವಂತಹ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆಯೂ ಚರ್ಚೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳ ಕಳ್ಳಸಾಗಣೆ ಕುರಿತು ಕೇಳಿದ ಪ್ರಶ್ನೆಗೆ ಕನೂಂಗೊ ಅವರು, ’ಮಕ್ಕಳ ಸಾಗಾಣಿಕೆಗೆ ಮೂಲ ಕಾರಣ ಬಡತನ. ಹೀಗಾಗಿ ಇಲ್ಲಿಯವರೆವಿಗೂ ಆಯೋಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ಕೇಂದ್ರಿತವಾಗಿ ಕೆಲಸ ಮಾಡುತ್ತಿತ್ತು. ಈಗ ಕುಟುಂಬ ಕೇಂದ್ರಿತವಾಗಿ ಕೆಲಸ ಮಾಡಲು ಯೋಚಿಸುತ್ತಿದ್ದೇವೆ. ಮೊದಲು ಬಡತನದಿಂದ ಬಳಲುತ್ತಿರುವ ಕುಟುಂಬಗಳನ್ನು ಬಲವರ್ಧಿಸಬೇಕಿದೆ. ಅವರಲ್ಲಿ ಸುರಕ್ಷಿತ ಭಾವನೆ ಮೂಡಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ಆಯೋಗ ಚರ್ಚೆ ನಡೆಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.