
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ತಾಯಿಯ ಒಡೆತನದಲ್ಲಿರುವ ಭೂಮಿಯ ಹರಾಜು ಪ್ರಕ್ರಿಯೆ ಇತ್ತೀಚೆಗೆ ನಡೆದಿದ್ದು, ಖರೀದಿಸಲು ಯಾರೊಬ್ಬರೂ ಮುಂದೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್ ಪ್ರದೇಶದಲ್ಲಿ ನಾಲ್ಕು ಕಡೆ ಇರುವ ₹ 20 ಲಕ್ಷ ಮೌಲ್ಯದ ಆಸ್ತಿಗಳ ಮಾರಾಟಕ್ಕೆ 'ಕಳ್ಳಸಾಗಣೆ ಮತ್ತು ವಿದೇಶಿ ವಿನಿಮಯ ದುರುಪಯೋಗ ತಡೆ (ಆಸ್ತಿ ಮುಟ್ಟುಗೋಲು) ಕಾಯ್ದೆ'ಗೆ ಸಂಬಂಧಿಸಿದ ಪ್ರಾಧಿಕಾರ (ಎಸ್ಎಫ್ಇಎಂಎ) ನಡೆಸಿದ ಐದನೇ ಪ್ರಯತ್ನ ಇದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನವೆಂಬರ್ 4ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಯಾರೊಬ್ಬರೂ ಆಸಕ್ತಿ ತೋರಿಲ್ಲ ಎಂದಿರುವ ಅವರು, ಪ್ರಾಧಿಕಾರವು ಮತ್ತೊಮ್ಮೆ ಹರಾಜು ನಡೆಸಲಿದೆ ಎಂದು ಹೇಳಿದ್ದಾರೆ.
ಕಳೆದ ಹರಾಜಿನಲ್ಲಿ, ವ್ಯಕ್ತಿಯೊಬ್ಬ ಒಂದು ಆಸ್ತಿಯನ್ನು ₹ 2 ಕೋಟಿಗೆ ಖರೀದಿಸಲು ಮುಂದಾಗಿದ್ದ. ಆದರೆ, ವ್ಯವಹಾರವನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ, ಆತನನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟದ ಸೂತ್ರಧಾರಿಗಳಲ್ಲಿ ಒಬ್ಬನಾಗಿರುವ ದಾವೂದ್, ಸದ್ಯ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.