ನವದೆಹಲಿ:21 ದಿನಗಳ ಲಾಕ್ಡೌನ್ ಅವಧಿಯಲ್ಲಿ ಅವಶ್ಯಕ ಮತ್ತು ಅವಶ್ಯಕವಲ್ಲದ್ದು ಎಂದು ವಿಂಗಡಿಸದೆ ಎಲ್ಲ ರೀತಿಯ ಸರಕು ಸಾಗಾಣಿಕೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಸುದ್ದಿ ಪತ್ರಿಕೆಗಳು, ಹಾಲು ಸಂಗ್ರಹ ಮತ್ತು ವಿತರಣೆ, ಆಹಾರ ವಸ್ತುಗಳು ಮತ್ತು ನೈರ್ಮಲ್ಯ ವಸ್ತುಗಳ ಸಾಗಾಟಕ್ಕೆಅನುಮತಿ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಬಲ್ಲಾ ಅವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.
ಪ್ಯಾಕ್ ಮಾಡಲಿರುವ ವಸ್ತುಗಳು ಸೇರಿದಂತೆ ಹಾಲು ಸಂಗ್ರಹ ಮತ್ತು ವಿತರಣೆಯ ಎಲ್ಲ ಪ್ರಕ್ರಿಯೆಗಳಿಗೆ ಅನುಮತಿ ನೀಡಲಾಗಿದೆ ಎಂದು ಬಲ್ಲಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ಸುದ್ದಿ ಪತ್ರಿಕೆಯ ವಿತರಣೆಗೂ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ನೈರ್ಮಲ್ಯ ಉತ್ಪನ್ನಗಳಾದ ಹ್ಯಾಂಡ್ ವಾಶ್, ಸೋಪ್, ಸೋಂಕು ನಿವಾರಕ, ಬಾಡಿ ವಾಶ್, ಶ್ಯಾಂಪೂ, ನೆಲ ಒರೆಸುವ ಸಾಧನಗಳು, ಮಾರ್ಜಕ, ಟಿಶ್ಯೂ ಪೇಪರ್, ಟೂತ್ ಪೇಸ್ಟ್, ಸ್ಯಾನಿಟರಿ ಪ್ಯಾಡ್, ಡೈಪರ್, ಬ್ಯಾಟರಿ ಸೆಲ್. ಚಾರ್ಜರ್ ಮೊದಲಾದವುಗಳ ಸಾಗಾಣಿಕೆಗೆ ಅನುಮತಿ ನೀಡಲಾಗಿದೆ.
ಅದೇ ವೇಳೆ ನಿರ್ಗತಿಕರಾಗಿರುವ ಜನರಿಗೆ, ವಲಸೆ ಕಾರ್ಮಿಕರಿಗೆ, ಲಾಕ್ಡೌನ್ನಿಂದಾಗಿ ಸಿಕ್ಕಿಹಾಕಿಕೊಂಡಿರುವವರಿಗೆ ಆಹಾರ, ನಿರಾಶ್ರಿತರ ಶಿಬಿರ ಒದಗಿಸುವುದಕ್ಕಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.