ನವದೆಹಲಿ: ತಾಜ್ಮಹಲ್ ಕುರಿತು ಇತಿಹಾಸದ ಪುಸ್ತಕಗಳಲ್ಲಿ ನಮೂದಾಗಿರುವ ‘ತಪ್ಪು ಮಾಹಿತಿ’ಗಳನ್ನು ತೆಗೆಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು.
‘ನಾವು ಇಲ್ಲಿ ಇತಿಹಾಸವನ್ನು ಕೆದಕಲು ಕುಳಿತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠ ಹೇಳಿತು. ಈ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಮೊರೆ ಹೋಗಬಹುದು ಎಂದೂ ಅರ್ಜಿದಾರರಿಗೆ ತಿಳಿಸಿತು.
‘ಇದು, ಕೋರ್ಟ್ಗೆ ಸಂಬಂಧವಿಲ್ಲದ ಅರ್ಜಿ. ಇತಿಹಾಸ ಇರುವಂತೆಯೇ ಮುಂದುವರಿಯಲಿ. ಅರ್ಜಿಯನ್ನು ವಜಾ ಮಾಡಲಾಗಿದೆ. ಪೀಠವು ಈ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ’ ಎಂದೂ ಹೇಳಿತು. 17ನೇ ಶತಮಾನದ ಈ ಸಂಕೀರ್ಣವನ್ನು ವಿಶ್ವ ಪಾರಂಪರಿಕ ತಾಣವಾಗಿ ಯುನೆಸ್ಕೊ ಗುರುತಿಸಿದೆ.
ಇತಿಹಾಸ ಪುಸ್ತಕಗಳು ಮತ್ತು ಪಠ್ಯಪುಸ್ತಕಗಳಲ್ಲಿ ತಾಜ್ಮಹಲ್ ನಿರ್ಮಾಣ ಕುರಿತು ತಪ್ಪು ಮಾಹಿತಿಗಳು ಸೇರ್ಪಡೆಯಾಗಿವೆ. ಇವುಗಳನ್ನು ತೆಗೆಯುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುರ್ಜೀತ್ ಸಿಂಗ್ ಯಾದವ್ ಅವರು ಅರ್ಜಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.