
ಮಾಧವ ಗಾಡ್ಗೀಳ್ ಮಾತನಾಡಿದರು
– ಪ್ರಜಾವಾಣಿ ಚಿತ್ರ
ಪುಣೆ: ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಅವಿರತವಾಗಿ ಶ್ರಮಿಸಿದ, ದೇಶದ ಹೆಸರಾಂತ ಪರಿಸರ ವಿಜ್ಞಾನಿ ಮಾಧವ ಧನಂಜಯ ಗಾಡ್ಗೀಳ್ (83) ಬುಧವಾರ ರಾತ್ರಿ ಪುಣೆಯಲ್ಲಿ ನಿಧನರಾದರು.
‘ಅಲ್ಪಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ’ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅವರಿಗೆ ಪುತ್ರ, ಪುತ್ರಿ ಇದ್ದಾರೆ. ಹವಾಮಾನ ವಿಜ್ಞಾನಿಯಾಗಿದ್ದ ಪತ್ನಿ ಸುಲೋಚನಾ ಗಾಡ್ಗೀಳ್ 2025ರ ಜುಲೈನಲ್ಲಿ ಮೃತಪಟ್ಟಿದ್ದರು.
‘ಭಾರತದ ಪರಿಸರ ಸಂಶೋಧನೆ ಮತ್ತು ಸಂರಕ್ಷಣಾ ನೀತಿ’ ರೂಪಿಸುವಲ್ಲಿ ಗಾಡ್ಗೀಳ್ ಮಹತ್ವದ ಪಾತ್ರ ವಹಿಸಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ (ಐಐಎಸ್ಸಿ) ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕರಾಗಿ, ‘ಗಾಡ್ಗೀಳ್ ಆಯೋಗ’ ಎಂದೇ ಹೆಸರಾಗಿದ್ದ ‘ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ (ಡಬ್ಲ್ಯುಜಿಇಇಪಿ) ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
* ಪುಣೆಯ ಪ್ರಸಿದ್ಧ ಕುಟುಂಬದಲ್ಲಿ ಗಾಡ್ಗೀಳ್ ಅವರು 1942ರ ಮೇ 24ರಂದು ಜನಿಸಿದರು. ಹೆಸರಾಂತ ಅರ್ಥಶಾಸ್ತ್ರಜ್ಞ, ಗೋಖಲೆ ಇನ್ಸ್ಟಿಟ್ಯೂಟ್ನ ಮಾಜಿ ನಿರ್ದೇಶಕ ಧನಂಜಯ ರಾಮಚಂದ್ರ ಗಾಡ್ಗೀಳ್ ಅವರ ತಂದೆ. ತಾಯಿ ಪ್ರಮೀಳಾ ಗಾಡ್ಗೀಳ್.
* 1963ರಲ್ಲಿ ಫರ್ಗ್ಯೂಸನ್ ಕಾಲೇಜಿನಿಂದ ಜೀವಶಾಸ್ತ್ರದಲ್ಲಿ ಪದವಿ, 1965ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1969ರಲ್ಲಿ ಪಿಎಚ್.ಡಿ ಅಧ್ಯಯನಕ್ಕಾಗಿ ಹಾರ್ವರ್ಡ್ ವಿಶ್ವದ್ಯಾಲಯ ಸೇರಿದ ಅವರು, ಅಲ್ಲಿ ಗಣಿತ, ಪರಿಸರ ವಿಜ್ಞಾನ ಮತ್ತು ಪ್ರಾಣಿಗಳ ನಡವಳಿಕೆ ಕುರಿತು ಅಧ್ಯಯನ ನಡೆಸಿದರು.
* ಹಾರ್ವರ್ಡ್ ವಿಶ್ವದ್ಯಾಲಯದಿಂದ ಪಿಎಚ್.ಡಿ ಪಡೆದು, 1971ರಲ್ಲಿ ಭಾರತಕ್ಕೆ ಮರಳಿದ ಗಾಡ್ಗೀಳ್, ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನ ಅಧಿಕಾರಿಯಾಗಿ ಸೇರಿದರು. ಅಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದರು.
* 1973ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನುಸೇರಿದರು. ಬಳಿಕ ಪರಿಸರ ವಿಜ್ಞಾನಗಳ ಕೇಂದ್ರ, ಸೆಂಟರ್ ಫಾರ್ ಥಿಯರಿಟಿಕಲ್ ಸ್ಟಡೀಸ್ ಸ್ಥಾಪಿಸುವ ಮೂಲಕ ಭಾರತದಲ್ಲಿ ಆಧುನಿಕ ಪರಿಸರ ವಿಜ್ಞಾನ ಸಂಶೋಧನೆಗಳಿಗೆ ಅಡಿಗಲ್ಲು ಹಾಕಿದರು.
* ಜೀವವೈವಿಧ್ಯದ ದೃಷ್ಟಿಯಿಂದ ದುರ್ಬಲವಾದ ಭಾರತದ ವಿವಿಧ ಪ್ರದೇಶಗಳ ಅಧ್ಯಯನಕ್ಕಾಗಿ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಗಾಡ್ಗೀಳ್ ಕಾರ್ಯನಿರ್ವಹಿಸಿದ್ದರು.
*ಜನಸಂಖ್ಯೆ ಹೆಚ್ಚಳ, ಹವಾಮಾನ ವೈಪರೀತ್ಯ, ಮಾನವ ಹಸ್ತಕ್ಷೇಪ, ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳಿಂದ ಪಶ್ಚಿಮ ಘಟ್ಟಗಳ ಮೇಲಾಗುತ್ತಿರುವ ಪರಿಣಾಮ ಕುರಿತು ಅವರು ಅಧ್ಯಯನ ನಡೆಸಿದ್ದರು.
* ಡಬ್ಲ್ಯುಜಿಇಇಪಿ ಅಧ್ಯಕ್ಷರಾಗಿದ್ದ ಗಾಡ್ಗೀಳ್, 2010ರಲ್ಲಿ ಪಶ್ಚಿಮಘಟ್ಟದ ಬಹು ದೊಡ್ಡ ಭಾಗವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸುವಂತೆ ಶಿಫಾರಸು ಮಾಡಿ ಮಹತ್ವದ ವರದಿ ಸಲ್ಲಿಸಿದ್ದರು.
* ಗಾಡ್ಗೀಳ್ ವರದಿಯು ತೀವ್ರ ಚರ್ಚೆಗೆ ಕಾರಣವಾದರೂ ಇದನ್ನು ಭಾರತದ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಗುರುತಿಸಲಾಗಿದೆ.
* ಗಾಡ್ಗೀಳ್ ಅವರು ಪ್ರಧಾನಿಯವರ ವೈಜ್ಞಾನಿಕ ಸಲಹಾ ಮಂಡಳಿ, ರಾಷ್ಟ್ರೀಯ ಸಲಹಾ ಸಮಿತಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೇರಿದಂತೆ ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಉನ್ನತ ಮಟ್ಟದ ಸಮಿತಿಗಳಲ್ಲೂ ಕಾರ್ಯನಿರ್ವಹಿಸಿದ್ದರು.
* ಐಐಎಸ್ಸಿಯಿಂದ 2004ರಲ್ಲಿ ನಿವೃತ್ತರಾದ ಗಾಡ್ಗೀಳ್ ಅವರು ಬಳಿಕ ಪುಣೆಯ ಅಗರ್ಕರ್ ಸಂಶೋಧನಾ ಕೇಂದ್ರ ಮತ್ತು ಗೋವಾ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ, ಶೈಕ್ಷಣಿಕ ಕಾರ್ಯ ಮುಂದುವರಿಸಿದರು.
* ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಗಾಡ್ಗೀಳ್ ಅವರು ನಡೆಸಿದ ಪ್ರಯತ್ನಗಳಿಗಾಗಿ 2024ರಲ್ಲಿ ವಿಶ್ವಸಂಸ್ಥೆಯು ಅವರಿಗೆ ‘ಚಾಂಪಿಯನ್ ಆಫ್ ದ ಅರ್ಥ್’ ಪುರಸ್ಕಾರ ನೀಡಿ ಗೌರವಿಸಿತ್ತು.
* 1981ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮವಿಭೂಷಣ, ಶಾಂತಿ ಸ್ವರೂಪ ಭಟ್ನಾಗರ್ ಪುರಸ್ಕಾರ, ವೋಲ್ವೊ ಪರಿಸರ ಪ್ರಶಸ್ತಿ, ಟೇಲರ್ ಪರಿಸರ ಸಾಧಕ ಪ್ರಶಸ್ತಿ ಸೇರಿದಂತೆ ಗಾಡ್ಗೀಳ್ ಅವರಿಗೆ ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರಗಳು ಲಭಿಸಿವೆ.
* ಸಂಶೋಧಕ ಹಾಗೂ ಬರಹಗಾರರೂ ಆಗಿದ್ದ ಗಾಡ್ಗೀಳ್ ಅವರು, ‘ದಿಸ್ ಫಿಶರ್ಡ್ ಲ್ಯಾಂಡ್’ ಮತ್ತು ‘ಎಕಾಲಜಿ ಆ್ಯಂಡ್ ಈಕ್ವಿಟಿ’ ಸೇರಿದಂತೆ ಹಲವು ಕೃತಿಗಳಿಗೆ ಸಹ ಲೇಖಕರಾಗಿದ್ದಾರೆ. 250ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಅವರು ಮಂಡಿಸಿದ್ದರು.
* ಪರಿಸರ ಸಂರಕ್ಷಣೆ ಕುರಿತು ಇಂಗ್ಲಿಷ್ ಮತ್ತು ಮರಾಠಿ ಪತ್ರಿಕೆಗಳಲ್ಲಿ ಅವರು ನಿಯಮಿತವಾಗಿ ಅಂಕಣಗಳನ್ನು ಬರೆದಿದ್ದರು.
ಭಾರತವು ಪರಿಸರ ಕಾಳಜಿಯ ಬಹು ದೊಡ್ಡ ಧ್ವನಿಯನ್ನು ಕಳೆದುಕೊಂಡಿದೆ. ದೇಶದ ಹಸಿರಿನ ಧ್ಯೇಯಕ್ಕೆ ಹಿನ್ನಡೆ ಆಗಿದೆ.– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ (ಎಕ್ಸ್ ಪೋಸ್ಟ್ನಲ್ಲಿ)
ಪರಿಸರ ಮತ್ತು ಸಾಮಾಜಿಕ ನ್ಯಾಯದ ಧ್ವನಿಯಾಗಿದ್ದರು. ಅವರ ಜೀವನ ಮತ್ತು ಕಾರ್ಯಗಳು ಹಲವು ತಲೆಮಾರಿಗೆ ಸ್ಫೂರ್ತಿದಾಯಕವಾಗಿವೆ.– ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಗಾಡ್ಗೀಳ್ ಅವರು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯ ಚಾಂಪಿಯನ್ ಆಗಿದ್ದರು. ಕೇರಳದ ಸೈಲೆಂಟ್ ವ್ಯಾಲಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು– ಜೈರಾಂ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಎಕ್ಸ್ ಪೋಸ್ಟ್ನಲ್ಲಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.